ರಮ್ಯಕೃಷ್ಣನ್ ಹೆಸರು ಕೇಳಿದೊಡನೆ ಕಣ್ಣ ಮುಂದೆ ಬರುವುದು 'ಬಾಹುಬಲಿ' ಚಿತ್ರದ ಶಿವಗಾಮಿ ಪಾತ್ರ. ಆ ಪಾತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ರಮ್ಯಕೃಷ್ಣ ಹೆಸರಾದ್ರು. ಅದೊಂದೇ ಪಾತ್ರವಲ್ಲ ಪ್ರತಿಯೊಂದು ಪಾತ್ರಕ್ಕೂ ಹೇಳಿ ಮಾಡಿಸಿದಂತ ಸುಂದರ ಮುಖ ಅವರದ್ದು.
ರಜನೀಕಾಂತ್, ಸೌಂದರ್ಯ ಜೊತೆ ನಟಿಸಿದ್ದ 'ನರಸಿಂಹ' ಚಿತ್ರದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ರಮ್ಯಕೃಷ್ಣ ಮಾತನಾಡಿದ್ದಾರೆ. ಆ ಸಿನಿಮಾದಲ್ಲಿ ರಮ್ಯಕೃಷ್ಣ ಅವರದ್ದು ದುರಹಂಕಾರಿ ಸ್ವಭಾವದ ಪಾತ್ರ. ದೃಶ್ಯವೊಂದರಲ್ಲಿ ಸೌಂದರ್ಯ ಅವರು ರಮ್ಯಕೃಷ್ಣ ಕಾಲು ಒತ್ತುವಾಗ ಅವರನ್ನು ಮತ್ತಷ್ಟು ಅವಮಾನಿಸಲು ತಮ್ಮ ಕಾಲಿನಿಂದ ಅವರ ಕೆನ್ನೆಗೆ ಒದೆಯುವ ನೀಲಾಂಬರಿ ಎಂಬ ಪಾತ್ರ ಅದು. ಒಂದು ವೇಳೆ ನಿರ್ದೇಶಕ ಕೆ.ಎಸ್.ರವಿಕುಮಾರ್ ನನ್ನ ಬಳಿ ಬಂದು ವಸುಂಧರಾ ( ಸೌಂದರ್ಯ) ಪಾತ್ರ ಮಾಡುವಿರಾ.. ನೀಲಾಂಬರಿ ( ರಮ್ಯಕೃಷ್ಣನ್) ಪಾತ್ರ ಮಾಡುವಿರಾ ಎಂದು ಕೇಳಿದ್ದರೆ ನಾನು ಸೌಂದರ್ಯ ಮಾಡಿದ್ದ ಪಾತ್ರವನ್ನೇ ಆರಿಸಿಕೊಳ್ಳುತ್ತಿದ್ದೆ. ಆದರೆ, ಅವರು ನನಗೆ ಆ ಆಯ್ಕೆ ನೀಡಲಿಲ್ಲ.
ಆ ದಿನ ಸೌಂದರ್ಯ ಅವರ ಮುಖದ ಬಳಿ ಕಾಲು ಇಟ್ಟ ದೃಶ್ಯಕ್ಕಾಗಿ ನಾನು ಬಹಳ ಕಷ್ಟಪಟ್ಟೆ. ನಾನು ಅಭಿನಯಿಸುತ್ತಿದ್ದೇನೆ ಎಂದು ತಿಳಿದರೂ ಕೂಡಾ ಆ ದೃಶ್ಯ ಮಾಡಲು ಬಹಳ ಬೇಸರವಾಯಿತು. ಆದರೆ, ಆ ಪಾತ್ರಕ್ಕೆ ಒಪ್ಪಿಕೊಂಡ ಮೇಲೆ ಆ ದೃಶ್ಯ ನಿಭಾಯಿಸದೇ ವಿಧಿ ಇರಲಿಲ್ಲ. ನಾವು ಎಷ್ಟೇ ದೊಡ್ಡ ನಟಿಯರಾದರೂ ಹೀಗೆ ಕೆಲವೊಂದು ದೃಶ್ಯಗಳಲ್ಲಿ ಅಭಿನಯಿಸಲು ಬಹಳ ಕಷ್ಟವಾಗುತ್ತದೆ ಎಂದು ರಮ್ಯಕೃಷ್ಣನ್ ಹೇಳಿಕೊಂಡಿದ್ದಾರೆ. 1999 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ತಮಿಳಿನಲ್ಲಿ 'ಪಡಿಯಪ್ಪ' ತೆಲುಗಿನಲ್ಲಿ 'ನರಸಿಂಹ' ಹೆಸರಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆಯಾಗಿತ್ತು.