‘ರಾಕ್ಷಸರು’ ಮೆಡ್ ಇನ್ ಪಾಪಿಸ್ತಾನ್ ಎಂಬ ಸಬ್ ಟೈಟಲ್ ಇಟ್ಟುಕೊಂಡ ಸಿನಿಮಾವೊಂದು ಚಂದನವನದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಸೆನ್ಸಾರ್ ಮಂಡಳಿಯಿಂದ ‘ಎ’ ಅರ್ಹತಾ ಪತ್ರ ಪಡೆದು ಬಿಡುಗಡೆಯಾಗಲು ಸಿದ್ಧವಾಗಿದೆ.
ಗರುಡಾದ್ರಿ ಸಿನಿಮಾಸ್ ಅಡಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಹಾಗೂ ವಂದನ ರಮೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕ್ರೈಂ ಹಿನ್ನೆಲೆ ಇದ್ದರೂ ಒಂದು ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆಯಂತೆ. ನಿರ್ಮಾಪಕ ರಮೇಶ್ ಕಶ್ಯಪ್ ಈ ಹಿಂದೆ ಮಾಲಾಶ್ರೀ ಅಭಿನಯದ ‘ಮಹಾಕಾಳಿ’, ಶಿವರಾಜ್ಕುಮಾರ್ ಅಭಿನಯದ ‘ಭಾಗ್ಯದ ಬಳೆಗಾರ’ ಹಾಗೂ ಹೆಚ್ಚು ಹೆಸರು ತಂದು ಕೊಟ್ಟ ಯೋಗಿ ಅಭಿನಯದ ‘ನಂದ ಲವ್ಸ್ ನಂದಿತ’ ಚಿತ್ರಗಳ ನಿರ್ಮಾಪಕರು. ಈ ಸಿನಿಮಾಕ್ಕೆ ರಜತ್ ಆಕ್ಷನ್ ಕಟ್ ಹೇಳಿದ್ದು, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಎಮಿಲ್ ಸಂಗೀತ (ಜಿಂಕೆ ಮರೀನಾ...ಜಿಂಕೆ ಮರೀನಾ ಹಾಡು ಖ್ಯಾತಿಯ) ನೀಡಿರುವ ಈ ಚಿತ್ರಕ್ಕೆ ಜನಾರ್ಧನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ರಾಜಶೇಖರ್ ಸಂಭಾಷಣೆ ಒದಗಿಸಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ನಾಜಾರ್, ಸುಮನ್, ರಾಜೀವ್ ಖೇರ್, ಟಗರು ಖ್ಯಾತಿಯ ತ್ರಿವೇಣಿ ಜೊತೆಗೆ ಹತ್ತು ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ.