'ನಾನು ಪುನೀತ್ ಮಾತಾಡ್ತಾ ಇದ್ದೀನಿ. ನಿಮ್ಮ ಅಭಿನಯದ ‘ದಿಯಾ’ ಚಿತ್ರ ಬಹಳ ಸೊಗಸಾಗಿತ್ತು. ಅಭಿನಂದನೆ ಹೇಳಲು ಫೋನ್ ಮಾಡಿದೆ. ಹಾಂ, ಕೊರೊನಾ ವೈರಸ್ ಹಾವಳಿ ಮುಗಿದ ಮೇಲೆ ಬೆಂಗಳೂರಿಗೆ ಬನ್ನಿ. ಹಾಗೇನೇ, ನಮ್ಮ ಪ್ರಾಜೆಕ್ಟ್ನಲ್ಲಿ ನೀವು ಭಾಗಿ ಆಗಿ..!' ಎಂದು ಹೇಳುತ್ತಿದ್ದಂತೆ ಪೃಥ್ವಿ ಅಂಬರ್ ಫುಲ್ ಥ್ರಿಲ್ ಆಗಿದ್ದರಂತೆ.
ಹೌದು, ವಿಭಿನ್ನ ಕಥಾ ಹಂದರ ಹೊಂದಿರುವ ದಿಯಾ ಚಿತ್ರದ ಜನಪ್ರೀಯತೆಯೇ ಇದಕ್ಕೆ ಕಾರಣ. ಚಿತ್ರ ನೋಡಿರುವ ಸ್ಯಾಂಡಲ್ ವುಡ್ ಯುವರಾಜ ತುಳು ನಟನಿಗೆ ಕರೆ ಮಾಡಿದ್ದಾರೆ.
ಹೊಸ ಪ್ರತಿಭೆಗಳಿಗೆ ಆಹ್ವಾನ ಹಾಗೂ ಮನ್ನಣೆ ಸಿಗಲೆಂದು ಪಿಆರ್ಕೆ ಪ್ರೊಡಕ್ಷನ್ ಶುರು ಮಾಡಿರುವುದಾಗಿ ನಟ ಪುನೀತ್ ರಾಜ್ ಕುಮಾರ್ ಅನೇಕ ಬಾರಿ ಹೇಳಿದ್ದರು. ಈ ಮಾತಿಗೆ ತಪ್ಪದ ರೀತಿಯಲ್ಲಿ ಪವರ್ ಸ್ಟಾರ್ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಬ್ಯಾನರ್ನಡಿ ಪ್ರತಿಭಾವಂತ ನಟ, ನಟಿಯರ ಪ್ರತಿಭೆಗೆ ನೀರೆರೆಯುವ ಮಹತ್ವಪೂರ್ಣ ಕೆಲಸವನ್ನು ಅವರು ಮಾಡುತ್ತಿದ್ದಾರೆ.
ಪುನೀತ್ ಕರೆ ಸ್ವೀಕರಿಸಿದ ಪೃಥ್ವಿ ಅಂಬರ್ ಸಂತೋಷದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಅವರ ಪಿಆರ್ಕೆ ಬ್ಯಾನರ್ನಡಿ ನಿರ್ಮಾಣವಾಗುವ ಚಿತ್ರದಲ್ಲಿ ಅಭಿನಯಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ.
ತುಳು ಸಿನಿಮಾ ಜಗತ್ತಿನಲ್ಲಿ ಜನಪ್ರಿಯ ವ್ಯಕ್ತಿ ಪೃಥ್ವಿ ಅಂಬರ್, ಆರ್ಜೆ ಹಾಗೂ ವಿಜೆ ಆದವರು. ‘ದಿಯಾ’ ಸಿನಿಮಾ ನಂತರ ಕನ್ನಡ ಸಿನಿಮಾ ‘ಎಸ್’ ಶೀರ್ಷಿಕೆ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಅದ್ವಿತಿ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ಬಹಳ ವರ್ಷಗಳ ನಂತರ ‘ಸೈಕೋ’ ನಿರ್ದೇಶಕ ದೇವದತ್ತ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಸೂಪರ್ ಹಿಟ್ ತುಳು ಸಿನಿಮಾ ‘ಪಿಲಿಬೈಲ್ ಯಮುನಕ್ಕ’ದಲ್ಲಿ ಪೃಥ್ವಿ ಅಂಬರ್ ನಾಯಕನಾಗಿದ್ದರು. ಆಮೇಲೆ ಬರ್ಕೆ, ಗೋಲ್ಮಾಲ್, ಪಾಮನಕ್ಕ ದಿ ಗ್ರೇಟ್ ತುಳು ಸಿನಿಮಾ, ಕನ್ನಡದಲ್ಲಿ ರಾಜರು ನಂತರ ದಿಯಾ ಸಿನಿಮಾದಲ್ಲಿ ಸಾಕಷ್ಟು ಜನಪ್ರೀಯತೆ ಗಳಿಸಿದ್ದಾರೆ.