ಬೆಂಗಳೂರು: ರಶ್ಮಿಕಾ ಮಂದಣ್ಣ ನಟಿಸಿರುವ ತೆಲುಗು 'ಡಿಯರ್ ಕಾಮ್ರೇಡ್' ಸಿನಿಮಾ ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡದವರಾದ ರಶ್ಮಿಕಾ ಮಂದಣ್ಣ 'ಕನ್ನಡ ಮಾತನಾಡೋದು ಕಷ್ಟ' ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಹೇಳಿಕೆಯೇ ವಿವಾದದ ಕಿಡಿ ಹೊತ್ತಿಸಿತ್ತು. ಕರ್ನಾಟಕದಲ್ಲಿ ಈ ನಟಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ರಶ್ಮಿಕಾ ನಟಿಸಿರುವ ಡಿಯರ್ ಕಾಮ್ರೇಡ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಬಾರದೆಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದವು. ಅದಾಗ್ಯೂ ಕೂಡ ಇಂದು ಡಿಯರ್ ಕಾಮ್ರೇಡ್ ಥಿಯೇಟರ್ಗೆ ಬಂದಿದೆ. ಇದರಿಂದ ಕೆರಳಿರುವ ಕನ್ನಡಿಗರು ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿದ್ದಾರೆ .
ನಗರದ ಮೇನಕಿ ಚಿತ್ರಮಂದಿರದ ಎದುರು ರಶ್ಮಿಕಾ ಮಂದಣ್ಣ ಭಾವಚಿತ್ರದ ಪೋಸ್ಟರ್ಗಳನ್ನು ಹಿಡಿದ ಪ್ರತಿಭಟನಾಕಾರರು, ಸಿನಿಮಾ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದರು. ರಶ್ಮಿಕಾ ವಿರುದ್ಧ ಘೋಷಣೆ ಕೂಗಿ ಥಿಯೇಟರ್ಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಬಳಿಕ ಮಾಧ್ಯಮಗಳ ಎದುರು ರಶ್ಮಿಕಾ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಚಿತ್ರರಂಗದಲ್ಲಿ ಬೆಳೆಯುವಾಗ ಅವರಿಗೆ ಕನ್ನಡ ಬೇಕಾಗಿತ್ತು. ಆದರೆ, ಈಗ ಬೇಡವಾಗಿದೆ. ಅದಕ್ಕಾಗಿ ಅವರು ನಟಿಸಿರುವ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂದು ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಕೈಕಟ್ಟಿ ಕುಳಿತಿದ್ದಾರೆ. ಕರ್ನಾಟಕದಿಂದ ರಶ್ಮಿಕಾ ಮಂದಣ್ಣ ಅವರನ್ನು ಓಡಿಸಬೇಕು ಎಂದು ಆಗ್ರಹಿಸಿದರು.