ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಹೊಸದೇನಲ್ಲ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಕೂಡ ಬಣ್ಣದ ಅಂಗಳಕ್ಕೆ ಬಂದಾಗಿದೆ.
ಈಗ ಸಚಿವ ಜಮೀರ್ ಅಹಮದ್ ಅವರ ಪುತ್ರ ಜಯಿದ್ ಖಾನ್ ತೆರೆಯ ಮೇಲೆ ನಾಯಕನಾಗೋಕೆ ರೆಡಿಯಾಗ್ತಿದ್ದಾರೆ. ಜಯಿದ್ ಅಭಿನಯಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿದ್ದಾರೆ. ಅಮೆರಿಕಾದಲ್ಲಿ ನಟನೆಯ ಕೋರ್ಸ್ ಮುಗಿಸಿ ಬಂದಿದ್ದು, ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ನಿರ್ದೇಶಕ ಜಯತೀರ್ಥ ಅವರಿಗೆ ನೀಡಿದ್ದಾರೆ .
ಈಗಾಗಲೇ ಜಮೀರ್ ಹಾಗೂ ಜಯತೀರ್ಥ ಈ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಜಯಿದ್ಗೆ ಕಥೆ ಬರೆಯೋದಕ್ಕೆ ರೆಡಿಯಾಗ್ತಿರುವುದಾಗಿ ಜಯತೀರ್ಥ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ. ಹೊಸ ರೀತಿಯ ಕಥೆ ಮಾಡಲು ಪ್ಲ್ಯಾನ್ ಮಾಡ್ತಿದ್ವಿ. ಈ ಕಥೆ ಜಮೀರ್ ಅಹಮದ್ ಅವರಿಗೆ ಇಷ್ಟವಾದ್ರೆ ಖಂಡಿತಾ ಜಯಿದ್ ಅವರ ಚೊಚ್ಚಲ ಚಿತ್ರ ನಾನೇ ನಿರ್ದೇಶನ ಮಾಡ್ತೀನಿ ಎಂದಿದ್ದಾರೆ ಜಯತೀರ್ಥ.
ಜಯತೀರ್ಥ ಸ್ಯಾಂಡಲ್ವುಡ್ ಯಶಸ್ವಿ ನಿರ್ದೇಶಕ. ಇತ್ತೀಚಿಗಷ್ಟೆ ಅವರ ನಿರ್ದೇಶನದ 'ಬೆಲ್ ಬಾಟಂ' ಚಿತ್ರ ಯಶಸ್ವಿಯಾಗಿ ಐವತ್ತು ದಿನ ಪೂರೈಸಿದೆ.