1976ರಲ್ಲಿ ತಾಂತ್ರಿಕ ಬ್ರಹ್ಮ ಎಂದೇ ಕರೆಸಿಕೊಂಡ ಪುಟ್ಟಣ್ಣ ಕಣಗಾಲ್ "ಕಥಾ ಸಂಗಮ" ಚಿತ್ರವನ್ನು ನಿರ್ದೇಶನ ಮಾಡಿ, ಹೊಸ ಇತಿಹಾಸ ಸೃಷ್ಟಿಸಿದ್ದರು. ಅಲ್ಲದೆ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ರು. ಇದೇ ಟೈಟಲ್ ಮತ್ತೆ ಬಳಸಿಕೊಂಡು ನಿರ್ದೇಶಕ ರಿಷಭ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಚಿತ್ರತಂಡ ಪುಟ್ಟಣ್ಣ ಕಣಗಲ್ಗೆ ಅರ್ಪಿಸಿದೆ. ಹಾಗೂ ಚಿತ್ರದ ಟ್ರೇಲರ್ ರಿಲೀಸ್ ಮಾಡಿದೆ.
ಕಥಾ ಸಂಗಮ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ನಿರ್ದೇಶಕ ಪುಟ್ಟಣ್ಣ ಕಣಗಲ್ ಪತ್ನಿ ನಾಗಲಕ್ಷ್ಮಿ ಅವರನ್ನು ಆಹ್ವಾನಿಸಲಾಗಿತ್ತು. ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ ಪುಟ್ಟಣ್ಣರ ಪತ್ನಿ, ನಿರ್ದೇಶಕ ರಿಷಭ್ ಶೆಟ್ಟಿ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಈ ಚಿತ್ರತಂಡದಲ್ಲಿ ಪ್ರಮುಖರು ಅವರು. ಅವರ ಮಾತನ್ನು ಎಲ್ಲರೂ ಕೇಳಿ. ಮುಂದೆ ಇನ್ನೂ ಒಳ್ಳೆಯ ಸಿನಿಮಾಗಳನ್ನು ಮಾಡಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ರಿಷಭ್ ಶೆಟ್ಟಿ, ಒಂದೇ ಸಿನಿಮಾದಲ್ಲಿ ಹಲವು ಕಥೆಗಳನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಮೊದಲು ಈ ಸಿನಿಮಾ ಮಾಡುವಾಗ ಭಯ ಇತ್ತು. ಯಾಕಂದ್ರೆ ಈ ಹಿಂದೆ ಪುಟ್ಟಣ್ಣ ಕಣಗಲ್ ಇದೇ ಹೆಸರಿನ ಸಿನಿಮಾ ಮಾಡಿದ್ರು. ನಮ್ಮಿಂದ ಆ ರೀತಿ ಮಾಡಲು ಸಾಧ್ಯನಾ ಅಂತಾ ಮಾಡಿದೆವು. ಆದ್ರೆ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.
ಇನ್ನು ಕಥಾ ಸಂಗಮ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಮತ್ತೊಂದು ಹೊಸ ಇತಿಹಾಸ ನಿರ್ಮಾಣ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ.