ಮೊನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಜವೀರ ಮದಕರಿ’ ಚಿತ್ರೀಕರಣ ಕೇರಳದಲ್ಲಿ ಮೊದಲ ಒಂದು ವಾರದ ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದಲ್ಲಿ ಹೈದರಾಲಿಯ ಪಾತ್ರದ ಸನ್ನಿವೇಶಗಳಿಗೆ ಯಾವ ಅರಮನೆಯಲ್ಲಿ ಚಿತ್ರೀಕರಣ ಮಾಡಬೇಕು ಎಂಬ ತಲಾಷ್ ನಡೆಯುತ್ತಿದೆ ಎನ್ನಲಾಗಿದೆ.
ಈ ಸಮಯದಲ್ಲಿ ಚಕ್ರವರ್ತಿ ದರ್ಶನ್ ಅವರ ಎಂಟ್ರಿ ಈ ‘ರಾಜ ವೀರ ಮದಕರಿ’ ಸಿನಿಮಾದಲ್ಲಿ ಹೇಗಿರಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪುರಾತನ ಕಾಲದ ದೇವಸ್ಥಾನದ ಮುಂದಿರುವ 50 ಅಡಿ ದೀಪದ ಕಂಬಕ್ಕೆ ದೀಪ ಬೆಳಗುವುದರೊಂದಿಗೆ ದರ್ಶನ್ ಅವರ ಮೊದಲ ದೃಶ್ಯ ಅನಾವರಣಗೊಳ್ಳಲಿದೆ ಎನ್ನಲಾಗಿದೆ. ಜೋಕಾಲಿಯಲ್ಲಿ ತೇಲಿ ಬಂದು ಅಷ್ಟು ದೊಡ್ಡ ಎತ್ತರದ ದೀಪವನ್ನು ಬೆಳಗುವುದಕ್ಕೆ ಒಂದು ಸ್ಪರ್ಧೆಯೇ ಏರ್ಪಾಡಾಗಿದ್ದು. ಅದರಲ್ಲಿ ವಿಜಯಶಾಲಿ ಆಗುವುದೇ ದರ್ಶನ್ ಅವರ ಪಾತ್ರ ಎಂದು ಮೂಲಗಳು ಹೇಳಿದ್ದು ಈ ದೃಶ್ಯವನ್ನು ಬಹಳ ರೋಚಕವಾಗಿ ಚಿತ್ರೀಕರಣ ಮಾಡಲಾಗುವುದು ಎನ್ನಲಾಗುತ್ತಿದೆ.
ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಹಂಸಲೇಖ, ಡಾ.ಬಿ.ಎಲ್. ವೇಣು, ರಾಕ್ಲೈನ್ ವೆಂಕಟೇಶ್ ಸಂಗಮದಲ್ಲಿ ಈ ಚಾರಿತ್ರಿಕ ಸಿನಿಮಾ ದೊಡ್ಡ ಮಟ್ಟದಲ್ಲಿ ಚಿತ್ರೀಕರಣ ಆರಂಭವಾಗಿದೆ. ಚಿತ್ರದುರ್ಗದ ಹೊರಾಂಗಣ ಹಾಗೂ ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸಲಾಗುವುದು. ಶ್ರೀನಿವಾಸಮೂರ್ತಿ,ದೊಡ್ಡಣ್ಣ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹೈದರ್ ಅಲಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದೇ ಕುತೂಹಲವಾಗಿದೆ.