ಬೆಂಗಳೂರು: ಒಂದು ಮೊಟ್ಟೆ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕವಿತಾಗೌಡ ಅಭಿನಯದ ಕ್ರಿಸ್ಟಲ್ ಪಾರ್ಕ್ ಸಿನಿಮಾ ಹಾಗೂ ಟಿ ಆರ್ ಚಂದ್ರಶೇಖರ್ ನಿರ್ಮಾಣದ ನಾಲ್ಕನೆ ಚಿತ್ರ "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಅಗಸ್ಟ್ 15ರ ಸ್ವಾತಂತ್ರ ದಿನಾಚರಣೆಯಂದು ರಾಜ್ಯಾದ್ಯಂತ ಸುಮಾರು 130ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಬೆಲ್ಬಾಟಂ ಖ್ಯಾತಿಯ ಸಗಣಿ ಪಿಂಟೊ ಪಾತ್ರದಾರಿ ಸುಜಯ್ ಶಾಸ್ತ್ರಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಒಂದು ಪಾತ್ರವನ್ನೂ ಪ್ಲೇ ಮಾಡಿದ್ದಾರೆ.ಟೈಟಲ್ನಲ್ಲೇ ಹೇಳುವಂತೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಒಂದು ಪಕ್ಕಾ ಹಾಸ್ಯಮಯ ಕೌಟುಂಬಿಕ ಚಿತ್ರ. ಕುಟುಂಬ ಸಮೇತ ಬಂದು ಯಾವುದೇ ಮುಜುಗರವಿಲ್ಲದೆ ಈ ಚಿತ್ರವನ್ನು ನೋಡಬಹುದು ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಏನಾದರೂ ಹೊಸತನ ಇದ್ರೆ ಮಾತ್ರ ಜನರನ್ನು ಚಿತ್ರಮಂದಿರದ ಕಡೆ ಕರೆ ತರಲು ಸಾಧ್ಯ ಎನ್ನುವುದು ನಿರ್ದೇಶಕ ಸುಜಯ್ ಶಾಸ್ತ್ರೀ ನಂಬಿಕೆ. ಅಲ್ಲದೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ನನ್ನ ಹಿಂದಿನ ಚಿತ್ರಗಳ ಪಾತ್ರಗಳಿಗಿಂತ ತುಂಬಾ ವಿಭಿನ್ನ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿದ್ದೇನೆ ಎಂದು ನಟ ರಾಜ್ ಬಿ ಶೆಟ್ಟಿ ತಿಳಿಸಿದ್ರು.
ಚಿತ್ರದಲ್ಲಿ ನಾನು ಪರ್ಪಲ್ ಪ್ರಿಯಾ ಎನ್ನುವ ಪಾತ್ರಧಾರಿಯಾಗಿ ಕಾಣಿಸಿದ್ದು ಒಂದು ಹುಡುಗನ ಜೀವನದಲ್ಲಿ ಹುಡುಗಿ ಬಂದಮೇಲೆ ಹಾಗೂ ಹುಡುಗಿಯ ಜೀವನದಲ್ಲಿ ಹುಡುಗ ಬಂದಮೇಲೆ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬುದೇ ಚಿತ್ರದ ಒನ್ಲೈನ್ ಸ್ಟೋರಿ ಎಂದು ಬಿಗ್ ಬಾಸ್ ಕವಿತಾಗೌಡ ತಿಳಿಸಿದರು.
ಈಗಾಗಲೇ ಈ ಚಿತ್ರ ತೆಲುಗು ಹಾಗೂ ಮಲಯಾಳಿಗೆ ರಿಮೇಕ್ ರೈಟ್ ಸೇಲ್ ಆಗಿದೆ. ಸೆಟ್ಲೈಟ್ ವಿಚಾರವಾಗಿ ಮಾತುಕತೆ ನಡೆದಿದೆ. ಈ ಚಿತ್ರ ಬಿಡುಗಡೆಗೆ ಮುನ್ನವೇ ಸೇಫ್ ಮಾಡಿದೆ ಎಂದು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ತಿಳಿಸಿದರು. ಇವರು ರಾಜ್ಯಾದ್ಯಂತ ಸುಮಾರು 130 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಮುಂದಿನವಾರ ಇತರೆ ರಾಜ್ಯಗಳಲ್ಲೂ ರಿಲೀಸ್ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ.