ಮೇ 31 ಕ್ಕೆ 4ನೇ ಹಂತದ ಲಾಕ್ಡೌನ್ ಅಂತ್ಯವಾಗಲಿದೆ. ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಗುಬ್ಬಿ ಜೈರಾಜ್, ಲಾಕ್ಡೌನ್ ಆರಂಭವಾದಾಗಿನಿಂದಲೂ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿದೆ. ಜೂನ್ 1 ರಿಂದ ರಾಜ್ಯದಲ್ಲಿ ವ್ಯಾಪಾರ, ವ್ಯವಹಾರಕ್ಕೆ ಸರ್ಕಾರ ಮತ್ತಷ್ಟು ಅನುವು ಮಾಡಿಕೊಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ನಿರ್ಮಾಪಕರ ಸಂಘ, ವಿತರಕರು, ಪ್ರದರ್ಶಕರ ಸಂಘದೊಂದಿಗೆ ನಾನು ಮುಖ್ಯಮಂತ್ರಿಗಳನ್ನು ನಾಳೆ ಭೇಟಿ ಮಾಡಿ ಥಿಯೇಟರ್ ತೆರೆಯಲು, ಸಿನಿಮಾ ಒಳಾಂಗಣ-ಹೊರಾಂಗಣ ಶೂಟಿಂಗ್ ನಡೆಸುವುದು ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಸರ್ಕಾರ ಯಾವ ಷರತ್ತುಗಳನ್ನು ವಿಧಿಸಿದರೂ ಕೂಡಾ ಅದರನ್ವಯ ಕೆಲಸ ಆರಂಭಿಸುತ್ತೇವೆ. ಇದರೊಂದಿಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಅನುದಾನ ನೀಡುವಂತೆ ಮನವಿ ಮಾಡುತ್ತೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದರು.
ಸದ್ಯ ಚಿತ್ರರಂಗದ ಚಟುವಟಿಕೆಗಳು ಬಂದ್ ಆಗಿರುವ ಕಾರಣ ಪರಿಸ್ಥಿತಿ ಬಹಳ ವಿಕೋಪಕ್ಕೆ ಬಂದು ತಲುಪಿದೆ. ಚಿತ್ರರಂಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಜೈರಾಜ್ ಚಿತ್ರರಂಗದ ಸಮಸ್ಯೆಗಳ ಬಗ್ಗೆ ವಿವರ ನೀಡಿದರು.