ಕವಿ, ನಿರ್ದೇಶಕ, ನಟ ಯೋಗರಾಜ್ ಭಟ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರುತೆರೆಯ 'ಚಕ್ರ' ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದ ಯೋಗರಾಜ್ ಭಟ್ ಇಂದು ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಕುಟುಂಬದವರೊಂದಿಗೆ ಯೋಗರಾಜ್ ಭಟ್ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಉಡುಪಿಯ ತುಳು ಕುಟುಂಬದ ರಾಮಚಂದ್ರ ಹಾಗೂ ಜಯಲಕ್ಷ್ಮಿ ದಂಪತಿಯ 7 ಮಕ್ಕಳಲ್ಲಿ ಯೋಗರಾಜಭಟ್ ಕೊನೆಯವರು. ಚಿಕ್ಕಂದಿನಿಂದ ಸಿನಿಮಾಗಳ ಸೆಳೆತ ಇದ್ದ ಭಟ್ಟರು 2003 ರಲ್ಲಿ ಮಯೂರ್ ಪಟೇಲ್, ರಾಧಿಕಾ ಕುಮಾರಸ್ವಾಮಿ ನಟನೆಯ 'ಮಣಿ' ಚಿತ್ರವನ್ನು ನಿರ್ದೇಶಿಸುವ ಮೂಲಕ ಬೆಳ್ಳಿತೆರೆಗೆ ಬಂದರು. ಈ ಚಿತ್ರ ಅಷ್ಟೇನೂ ಯಶಸ್ಸು ಕಾಣದಿದ್ದರೂ ನಂತರ ಬಂದ 'ರಂಗ ಎಸ್ಎಸ್ಎಲ್ಸಿ' ಚಿತ್ರದ ಮೂಲಕ ಯೋಗರಾಜ್ ಭಟ್ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆದರೆ 2006 ರಲ್ಲಿ ಬಿಡುಗಡೆಯಾದ 'ಮುಂಗಾರು ಮಳೆ' ಚಿತ್ರ ಯೋಗರಾಜ್ ಭಟ್ಗೆ ದೊಡ್ಡ ಬ್ರೇಕ್ ನೀಡಿತು. ಗಣೇಶ್ಗೆ ಕೂಡಾ ಈ ಚಿತ್ರ ಸ್ಟಾರ್ಡಮ್ ತಂದುಕೊಡ್ತು.
ಆ ನಂತರ ಭಟ್ಟರು ನಿರ್ದೇಶಿಸಿದ ಗಾಳಿಪಟ, ಇಂತಿ ನಿನ್ನ ಪ್ರೀತಿಯ, ಮನಸಾರೆ, ಪರಮಾತ್ಮ, ಲೈಫು ಇಷ್ಟೇನೇ, ಡ್ರಾಮ, ಪಂಚರಂಗಿ ಚಿತ್ರಗಳಿಗೆ ಕೂಡಾ ಒಳ್ಳೆ ಪ್ರಶಂಸೆ ವ್ಯಕ್ತವಾಯಿತು. 'ಡ್ರಾಮ' ಚಿತ್ರದ ಬೊಂಬೆ ಆಡ್ಸೋನು ಹಾಡಿಗಾಗಿ ಭಟ್ಟರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡಾ ದೊರೆಯಿತು. ನಿರ್ದೇಶನ ಮಾತ್ರವಲ್ಲದೆ, ದ್ಯಾವ್ರೇ, ಪರಪಂಚ, ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಭಟ್ಟರು ನಟಿಸಿದ್ದಾರೆ. ಬಹಳಷ್ಟು ಸಿನಿಮಾ ಹಾಡುಗಳಿಗೆ ಸಾಹಿತ್ಯ ಕೂಡಾ ರಚಿಸಿದ್ದಾರೆ.
ಯೋಗರಾಜ್ ಮೂವೀಸ್ ಎಂಬ ತಮ್ಮದೇ ಬ್ಯಾನರನ್ನು 2006 ರಲ್ಲಿ ಯೋಗರಾಜ್ ಭಟ್ ಆರಂಭಿಸಿದರು. ಸದ್ಯಕ್ಕೆ ಭಟ್ಟರು ಗಾಳಿಪಟ-2 ಚಿತ್ರದಲ್ಲಿ ಬ್ಯುಸಿಯಿದ್ಧಾರೆ. ಇದರ ಜೊತೆಗೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ರಕ್ಷಿತ ಹಾಗೂ ಜಗ್ಗೇಶ್ ಜೊತೆ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ.