ಇಂದು ವರನಟ ಡಾ. ರಾಜ್ಕುಮಾರ್ ಹುಟ್ಟುಹಬ್ಬ. ಅಭಿಮಾನಿಗಳು ಅಣ್ಣಾವ್ರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಡಾ. ರಾಜ್ಕುಮಾರ್ ಅವರ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಎಸ್.ಕೆ. ಭಗವಾನ್ ಗೋವಾದಲ್ಲಿ ಸಿಐಡಿ 999 ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಒಂದು ಘಟನೆಯನ್ನು ವಿವರಿಸಿದ್ದಾರೆ.
1968 ರಲ್ಲಿ ಗೋವಾ ಪೊಲೀಸ್ ಅಧಿಕಾರಿಯೊಬ್ಬರು ಡಾ. ರಾಜ್ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದರಂತೆ. ಆ ಸಮಯದಲ್ಲಿ 'ಗೋವಾದಲ್ಲಿ ಸಿಐಡಿ 999' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದು ಬಾಂಡ್ ಚಿತ್ರವಾಗಿದ್ದರಿಂದ ಮೂರು ವಿಶೇಷ ಕಾರುಗಳನ್ನು ಬಳಸಲಾಗಿತ್ತು. ಕನ್ನಡದ ನೇಟಿವಿಟಿ ಇರಲೆಂದು ಕಾರುಗಳಿಗೆ, ಜಿಡಿಎ (ಗೋವಾ) ಇಂಗ್ಲೀಷ್ ಅಕ್ಷರಗಳ ನಂಬರ್ ಪ್ಲೇಟ್ ಅಂಟಿಸಿ ಶೂಟ್ ಮಾಡುತ್ತಿದ್ದೆವು. ಡಾ ರಾಜ್ಕುಮಾರ್ ಒಂದು ಕಾರನ್ನು ವೇಗವಾಗಿ ಓಡಿಸುತ್ತಿದ್ದರು. ಮತ್ತೊಂದು ಕಾರು ಚೇಸಿಂಗ್ನಲ್ಲಿತ್ತು. ಮೂರನೇ ಕಾರಿನಲ್ಲಿ ನಾನು ಕ್ಯಾಮರಾದೊಂದಿಗೆ ಹಿಂಬಾಲಿಸುತ್ತಿದ್ದೆ. ಕಾರ್ಗಳಿಗೆ ನಕಲಿ ನಂಬರ್ಗಳಿವೆ, ಎಂದು ಅಲ್ಲಿನ ಪೊಲೀಸ್ ಒಬ್ಬರು, ಅಣ್ಣಾವ್ರು ಓಡಿಸುತ್ತಿದ್ದ ಕಾರನ್ನು ತಡೆದು, ರಾಜ್ಕುಮಾರ್ ಅವರನ್ನು ನೀವು ಯಾರು...? ಕಾರಿಗೆ ನಕಲಿ ನಂಬರ್ ಪ್ಲೇಟ್ ಇದೆ ಎಂದು ಪ್ರಶ್ನಿಸಿದ್ದಾರೆ.
ಈ ಸಿನಿಮಾ ಶೂಟಿಂಗ್ಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ, ನಾನು ಮೊದಲೇ ಕಲೆಕ್ಟರ್ ಅವರಿಂದ ಪಡೆದಿದ್ದ ಅನುಮತಿ ಪತ್ರವನ್ನು ತೋರಿಸಿದರೂ ಆ ಪೊಲೀಸ್ ಅಧಿಕಾರಿ ಒಪ್ಪದೆ ಕೊನೆಗೂ ನಮ್ಮನ್ನು ಜೀಪಿಗೆ ಹತ್ತಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು. ನಾನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ. ನಾನು ಹೇಳಿದ್ದನ್ನು ಹೀರೋ ಅನುಸರಿಸಿದ್ದಾರೆ. ಆದ್ದರಿಂದ ಅವರನ್ನು ಬಿಟ್ಟುಬಿಡಿ. ನಾನು ನಿಮ್ಮೊಂದಿಗಿರುತ್ತೇನೆ ಎಂದು ವಿನಂತಿಸಿಕೊಂಡೆ. ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಗೊತ್ತಾಗದೆ ರಾಜ್ ಮುಗುಳು ನಗುತ್ತಾ ನಿಂತಿದ್ದರು. ನಂತರ ರಾಜ್ಕುಮಾರ್ ಅವರನ್ನು ಹೋಟೇಲ್ಗೆ ಕಳಿಸಿ ನಾನು ಎಸಿಪಿ ಬಳಿ ಹೋದೆ. ಅದೃಷ್ಟಕ್ಕೆ ಎಸಿಪಿ ಸುಧೀಂದ್ರ ಕನ್ನಡದವರೇ ಆಗಿದ್ದರು. ನಾನು ಪ್ರತಿಯೊಂದನ್ನೂ ವಿವರಿಸಿದ ನಂತರ ಚಿತ್ರೀಕರಣದ ಸಮಯದಲ್ಲಿ ಮಾತ್ರ ನಂಬರ್ ಪ್ಲೇಟ್ ಬಳಸಿ ಎಂದು ಸೂಚನೆ ನೀಡಿ ಚಿತ್ರೀಕರಣಕ್ಕೆ ಅನುವು ಮಾಡಿಕೊಟ್ಟರು.
ಇದೆಲ್ಲಾ ಘಟನೆ ನಡೆದ ನಂತರ ಎಸಿಪಿ ಸುಧೀಂದ್ರ ಹಾಗೂ ಕುಟುಂಬ ರಾಜ್ಕುಮಾರ್ ಅವರನ್ನು ನೋಡಬೇಕು ಎಂದು ಕೇಳಿಕೊಂಡರು. ಶೂಟಿಂಗ್ ಮುಗಿದ ನಂತರ ಎಸಿಪಿ ಅವರಿಗೆ ಡಾ. ರಾಜ್ಕುಮಾರ್ ಅವರನ್ನು ಭೇಟಿ ಮಾಡಿಸಿದೆ. ಆ ಸಮಯದಲ್ಲಿ ನಕಲಿ ನಂಬರ್ ಪ್ಲೇಟ್ ಹಾಕಿ ಗೋವಾದಲ್ಲಿ ಲಿಕ್ಕರ್ ಮಾಫಿಯಾ ಮಾಡುವ ದಂಧೆ ಹೆಚ್ಚಾಗಿದ್ದ ಕಾರಣ ಪೊಲೀಸ್ ಪೇದೆ ಡಾ. ರಾಜ್ ಅವರನ್ನು ಅರೆಸ್ಟ್ ಮಾಡಿದರು ಎಂದು ಭಗವಾನ್ ಆ ದಿನದ ಘಟನೆಯನ್ನು ವಿವರಿಸಿದ್ದಾರೆ. ಡಾ. ರಾಜ್ಕುಮಾರ್ ಅವರಂತ ನಟ ಹುಡುಕಿದರೂ ಸಿಗುವುದಿಲ್ಲ ಎನ್ನುವುದು ನಿರ್ದೇಶಕ ಭಗವಾನ್ ಅವರ ಅಭಿಪ್ರಾಯ.