ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್ಟಿಆರ್ ಅಭಿನಯದ ಹೈವೋಲ್ಟೇಜ್ ಸಿನಿಮಾ ಆರ್ಆರ್ಆರ್. ಕ್ರಿಯೇಟಿವ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಈ ಚಿತ್ರದ ಅದ್ದೂರಿ ಪ್ರೀ ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ಮಾಡಲಾಯಿತು. ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವರಾಜ್ ಕುಮಾರ್ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಸಿಎಂ, ಸಮಸ್ತ ಕರ್ನಾಟಕದ ಜನತೆಯ ಪರವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಿರ್ದೇಶಕ ರಾಜಮೌಳಿ ನಮ್ಮವರು. ನಮ್ಮ ರಾಯಚೂರಿನವರು. ಅದೇ ರೀತಿ ಜೂನಿಯರ್ ಎನ್ಟಿಆರ್ ಅವರು ತಾಯಿ ಮೂಲ ಕನ್ನಡದ ನಂಟು ಹೊಂದಿದ್ದಾರೆ. ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು ಕನ್ನಡದಲ್ಲಿಯೂ ಮೆಗಾಸ್ಟಾರ್ ಎಂದರು.
ಆರ್ಆರ್ಆರ್ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಥೆ ಇದೆ. ಬಹಳಷ್ಟು ಜನರಿಗೆ ಈ ವಿಷಯ ತಿಳಿದಿಲ್ಲ. ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ರಣ ಕಹಳೆ ಊದಿದ ಮಹಿಳೆ ನಮ್ಮ ಕಿತ್ತೂರು ರಾಣಿ ಚೆನ್ನಮ್ಮ. ಝಾನ್ಸಿ ಲಕ್ಷ್ಮಿಬಾಯಿಗೂ ಮುನ್ನ ಚೆನ್ನಮ್ಮ ವೀರತ್ವ ತೋರಿಸಿದ್ದರು.
ನಮಗೆ ಸ್ವಾತಂತ್ರ್ಯ ಬರಲು ಅನೇಕ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿನ ನಮ್ಮ ಯುವ ಪೀಳಿಗೆಗೆ ಸತ್ಯ ತಿಳಿಯಬೇಕು. ಆಗ ಮಾತ್ರ ನಾವು ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ನಾನು ರಾಜಮೌಳಿ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು.
ರಾಜಮೌಳಿ ಅವರು ಸಿನಿಮಾ ಮೇಕರ್ ಅಲ್ಲ, ಅವರು ಸೃಷ್ಟಿಕರ್ತ. ಇದು ಭಾರತೀಯ ಸಿನಿಮಾ. ಈ ಚಿತ್ರವನ್ನು ನೋಡಿ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂಬ ವಿಶ್ವಾಸ ನನಗೆ ಇದೆ. ನಿಜವಾದ ದೇಶ ಪ್ರೇಮಿಗಳು, ಭಾರತದ ಬಗ್ಗೆ ಪ್ರೇಮ ಇರುವವರು ಥಿಯೇಟರ್ಗೆ ಹೋಗಿ ದುಡ್ಡು ಕೊಟ್ಟು ಈ ಸಿನಿಮಾ ನೋಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು.
ಇದು ತೆಲುಗು ಸಿನಿಮಾ ಆದರೂ ಕೂಡ ಕರ್ನಾಟಕಕ್ಕೆ ಬಂದು ಪ್ರೀ ರಿಲೀಸ್ ಕಾರ್ಯಕ್ರಮ ಮಾಡುವ ಮೂಲಕ ಕನ್ನಡ ಬಂಧವನ್ನ ಹೆಚ್ಚಿಸಿದ್ದಾರೆ. ಅದಕ್ಕೆ ಧನ್ಯವಾದಗಳು. ಈ ಸಿನಿಮಾ ಯಶಸ್ವಿಯಾಗಲಿ. ರಾಜಮೌಳಿ ಅವರು ತಮ್ಮ ರೆಕಾರ್ಡ್ಗಳನ್ನು ತಾವೇ ಮುರಿಯಲಿ ಎಂದು ಸಿಎಂ ಬೊಮ್ಮಾಯಿ ಹಾರೈಸಿದರು.
ಭಗತ್ ಸಿಂಗ್,ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ,ಚಂದ್ರಶೇಖರ್ ಆಜಾದ್, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅಂಥವರಿಗೆ ಈ ಸಿನಿಮಾ ಅರ್ಪಣೆ ಎಂದರು. ಇನ್ನು ಕೊನೆಯಲ್ಲಿ ಪುನೀತ್ ರಾಜ್ಕುಮಾರ್ ಅವ್ರನ್ನ ನೆನೆಯೋದನ್ನ ಸಿಎಂ ಮರೆಯಲಿಲ್ಲ. ಅಪ್ಪುನ ನಾನು ಹೇಗೆ ಮರೆಯಲು ಸಾಧ್ಯ? ಎಲ್ಲಿ ನೋಡಿದರೂ ನನಗೆ ಅಪ್ಪು ಕಾಣಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗರಲ್ಲಿ ಶಾಶ್ವತವಾದ ಸ್ಥಾನವನ್ನು ಪುನೀತ್ ಪಡೆದುಕೊಂಡಿದ್ದಾರೆ ಎಂದರು.
ಈ ಅದ್ದೂರಿ ವೇದಿಕೆಯಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಪುನೀತ್ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ ಎಂದು ಹೇಳುವ ಮೂಲಕ ಜನರ ಪ್ರೀತಿಗೆ ಪಾತ್ರರಾದರು.