ಕಳೆದ ಭಾನುವಾರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗಿದ್ದು ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ಕನ್ನಡದ ಜನತೆಗೆ ಶಾಕ್ ನೀಡಿದೆ. ಚಿರಂಜೀವಿ ಅವರು ನಮ್ಮಿಂದ ದೂರವಾಗಿ ಐದು ದಿನಗಳಾಗುತ್ತಾ ಬಂದರೂ, ಅವರಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಚಿರಂಜೀವಿ ಅವರು ಇಲ್ಲ ಎಂಬ ಬೇಸರದ ನಡುವೆ ಅವರ ಅಭಿನಯದ ಚಿತ್ರವೊಂದು ಈ ವಾರಾಂತ್ಯ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಚಿರಂಜೀವಿ ಸರ್ಜಾ ಅಭಿನಯದ, ಕೆ.ಎಂ ಚೈತನ್ಯ ನಿರ್ದೇಶನದ ಆದ್ಯಾ ಸಿನಿಮಾ ಇದೇ ಶನಿವಾರ ಸಂಜೆ 6 ಗಂಟೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದೇ ವರ್ಷ ಫೆಬ್ರವರಿ 21 ರಂದು ಆದ್ಯಾ ಸಿನಿಮಾ ಬಿಡುಗಡೆಯಾಗಿದ್ದು, ಚಿರಂಜೀವಿ ಸರ್ಜಾ ಜೊತೆಗೆ ಸಂಗೀತ ಭಟ್, ಶೃತಿ ಹರಿಹರನ್ ಮತ್ತು ರವಿಶಂಕರ್ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೇ 2016 ರಲ್ಲಿ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿರುವ ಕ್ಷಣಂ ಸಿನಿಮಾದ ರಿಮೇಕ್ ಇದಾಗಿದ್ದು, ಇಲ್ಲಿಗೆ ಬೇಕಾಗಿರುವ ಹಾಗೇ ಕತೆಯನ್ನು ಬದಲಾಯಿಸಲಾಗಿದೆ.

ಅದ್ಯಾ ಸಿನಿಮಾದ ಕತೆಯೇನು?
ಚಿರಂಜೀವಿ ಸರ್ಜಾ ಅವರು ನಾಯಕ ಆದಿತ್ಯ ಶಂಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಲ್ಕತ್ತಾದಲ್ಲಿಯೇ ವಾಸ ಇರುವ ಆದಿತ್ಯ ಶಂಕರ್ ತನ್ನ ಮಾಜಿ ಪ್ರೇಯಸಿಗೆ ಸಹಾಯ ಮಾಡುವುದಕ್ಕಾಗಿ ಬೆಂಗಳೂರಿಗೆ ಬರುತ್ತಾರೆ. ನಾಯಕಿ ಸಂಗೀತಾ ತನ್ನ ಮಗಳನ್ನು ಕಳೆದುಕೊಂಡಿದ್ದು ಅದನ್ನು ಹುಡುಕಲು ನಾಯಕ ಆದಿತ್ಯ ಸಹಾಯ ಮಾಡುತ್ತಾನೆ. ಕಿಡ್ನಾಪ್ ಆಗಿರುವ ಹುಡುಗಿಯ ವಿಳಾಸ ಪತ್ತೆ ಮಾಡುವ ಆದಿತ್ಯ ಹೆಚ್ಚಿನ ಸಹಾಯಕ್ಕಾಗಿ ಪೊಲೀಸ್ ಕಮೀಷನರ್ ಶ್ರುತಿ ಬಳಿ ಬರುತ್ತಾನೆ.
ಆದರೆ ಪೊಲೀಸ್ ಶ್ರುತಿ ಕಳೆದು ಹೋಗಿರುವ ಹುಡುಗಿಯನ್ನು ಹುಡುಕದಂತೆ ವಾರ್ನ್ ಮಾಡುತ್ತಾಳೆ. ಇತ್ತ ಮಗಳು ಸಿಗದೇ ಸಂಗೀತಾ ಕಟ್ಟಡದ ಮೇಲಿನಿಂದ ಬಿದ್ದು ಸಾಯುತ್ತಾಳೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ