ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದ್ರಜಿತ್ ಲಂಕೇಶ್ ಅವರು ಚಿರಂಜೀವಿ ಸರ್ಜಾ ಹೆಸರು ಪ್ರಸ್ತಾಪಿಸಿದ್ದರು. ಈಗ ಚಿರಂಜೀವಿ ಅವರ ಪತ್ನಿ ಮೇಘನಾ ರಾಜ್ ಫಿಲ್ಮ್ ಛೇಂಬರ್ ಗೆ ಪತ್ರ ಬರೆದಿದ್ದು, ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಹಾಗೂ ಈ ವಿಚಾರದಲ್ಲಿ ಚಿರು ಹೆಸರು ಪ್ರಸ್ತಾಪಿಸಿದ್ದಕ್ಕೆ ಇಂದ್ರಜಿತ್ ಅವರು ಎಲ್ಲರೆದುರು ಕ್ಷಮೆ ಕೇಳಬೇಕೆಂದು ಪತ್ರದಲ್ಲಿ ಬರೆದಿದ್ದಾರೆ.

ನಟಿ ಆಶಿತಾ ಚಂದ್ರಪ್ಪ ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, "ನಾನು ಈ ಡ್ರಗ್ಸ್ ಮಾಫಿಯಾ ವಿಷಯದ ಅನುಯಾಯಿ ಅಲ್ಲ, ಆದರೂ ಪ್ರಾದೇಶಿಕ ಚಾನಲ್ಗಳು ಚಿರಂಜೀವಿ ಹೆಸರು ಪ್ರಸ್ತಾಪಿಸಿದ್ದು ನನ್ನ ಗಮನಕ್ಕೆ ಬಂತು. ತೀರಿ ಹೋದ ವ್ಯಕ್ತಿಯು ಈ ಸನ್ನಿವೇಶದಲ್ಲಿ ಬರುತ್ತಿರುವುದು ಆಶ್ಚರ್ಯಕರವಾಗಿದೆ. ಆ ವ್ಯಕ್ತಿ ಇಲ್ಲವೆಂದ ಮಾತ್ರಕ್ಕೆ ಅವನ ಹೆಸರು ಕೆಡಿಸುವ ಕೆಲಸ ಮಾಡಬೇಡಿ. ಚಿರು ಈ ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡಿಲ್ಲವೆಂದು ವಿಶ್ವಾಸದಿಂದ ಹೇಳಬಲ್ಲೆ. ಪ್ರಕರಣದಲ್ಲಿ ಚಿರು ಹೆಸರನ್ನು ಎಳೆದು ತಂದಿರುವುದು ಆತನ ಮನೆಯವರಿಗೂ ಬೇಸರ ಉಂಟು ಮಾಡಿದೆ" ಎಂದಿದ್ದಾರೆ.

"ಇಂಡಸ್ಟ್ರಿಯಲ್ಲಿ ತುಂಬಾ ಮಂದಿ ಡ್ರಗ್ಸ್ ತೆಗೆದುಕೊಳ್ಳದವರೂ ಇದ್ದಾರೆ. ಜೊತೆಗೆ ಮೇಕಪ್ ಹಾಕುವ ಮೊದಲು ನಾವು ಸೆಟ್ ನ್ನು ಪೂಜಿಸುತ್ತೇವೆ" ಎನ್ನುವ ಆಶಿತ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದಿದ್ದಾರೆ. ಅಂಬರೀಶ್ ಅವರು ಆಲ್ಕೋಹಾಲ್ ಸೇವಿಸಿದ್ದಾಗ ಎಂದಿಗೂ ಶೂಟಿಂಗ್ ಮಾಡುತ್ತಿರಲಿಲ್ಲ. ಅದು ಅವರು ವೃತ್ತಿಯನ್ನು ಗೌರವಿಸುತ್ತಿದ್ದ ರೀತಿಯಾಗಿತ್ತು ಎಂದು ಹೇಳಿದ್ದಾರೆ ಆಶಿತ.