ಜಗತ್ತಿನಲ್ಲಿ ಆಗು ಹೋಗುಗಳ ನೈಜ ಘಟನೆಯಾಧಾರಿತ ಸಿನಿಮಾಗಳು ಸಾಕಷ್ಟು ಬಂದು ಹೋಗಿವೆ. ಇದೀಗ ಹೊಸಬರ ತಂಡವೊಂದು ಇಡೀ ಪ್ರಪಂಚವನ್ನೇ ನಡುಕಗೊಳಿಸಿದ್ದ 'ಬ್ಲೂ ಗೇಮ್' ಕಥೆಯಾಧಾರಿತ ಮಕ್ಕಳ ಚಿತ್ರವನ್ನು ಮಾಡಿದ್ದಾರೆ.
ನೀಲಿ ತಿಮಿಂಗಿಲ ಅಡಿಬರಹ ಹೊತ್ತ 'ಮನಸ್ಸಿನಾಟ' ಸಿನಿಮಾದ ಟ್ರೇಲರ್ ಹಾಗೂ ಹಾಡುಗಳನ್ನು ನಿನ್ನೆ ರಿಲೀಸ್ ಮಾಡಲಾಗಿದೆ. ಇಂದು ನಗರದ ಎಸ್ಆರ್ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಭಾ.ಮ ಗಿರೀಶ್, ಉಮೇಶ್ ಬಣ್ಕರ್, ಹಿರಿಯ ಪೋಷಕ ನಟ ದತ್ತಣ್ಣ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರದಲ್ಲಿ ಮಕ್ಕಳ ಹಾಗೂ ಪೋಷಕರ ನಡುವಿನ ವಾತಾವರಣ ಹೇಗಿದ್ದರೆ ಚೆಂದವೆಂಬುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆಯಂತೆ. ಆಧುನಿಕ ಪ್ರಪಂಚದ ತಂತ್ರಜ್ಞಾನಕ್ಕೆ ಕಳೆದು ಹೊಗ್ತಿರೋ ಮಾನವೀಯ ಮೌಲ್ಯ, ಪೋಷಕರ ಪ್ರೀತಿಯಿಂದ ವಂಚಿತನಾದ ಮಗನ ಅಳು, ದುಶ್ಚಟಗಳಿಗೆ ಬಲಿಯಾಗುವ ಮಕ್ಕಳ ಕಥೆಯನ್ನು ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ಹೇಳಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಹಿರಿಯ ನಟ ದತ್ತಣ್ಣ, ಎನ್. ನಟರಾಜ್, ಮಾಸ್ಟರ್ ಹರ್ಷಿತ್, ಪ್ರೀತಿಕಾ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದು ಆರ್. ರವೀಂದ್ರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡಿ. ಮಂಜುನಾಥ್ ಹನುಮೇಶ್ ಪಾಟೀಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಸೆನ್ಸಾರ್ ಬೋರ್ಡ್ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಟ್ಟ ಕಾರಣ ಟ್ರಿಬ್ಯುನಲ್ನಲ್ಲಿ ಹೋರಾಡಿ ಚಿತ್ರತಂಡ 'ಯು' ಸರ್ಟಿಫಿಕೇಟ್ ಗಿಟ್ಟಿಸಿದೆ. ಏಪ್ರಿಲ್ ಮೂರನೇ ವಾರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.