ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಮೃತಧಾರೆ ಸಿನಿಮಾದಲ್ಲಿ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿ ಮಾಡಿದ್ದರು. ಕೆಲವು ದಿನಗಳ ಹಿಂದೆ ರಮೇಶ್ ಅರವಿಂದ್ ನಿರ್ದೇಶನದ ‘ಬಟ್ಟರ್ ಫ್ಲೈ’ ಸಿನಿಮಾದಲ್ಲಿ ‘ಸುಕವೇವ ಸುರಪಾನವಿದು‘ ಹಾಡನ್ನು ರಾಪ್ ಶೈಲಿಯಲ್ಲಿ ಹಾಡಿದ್ದರು.
ಇದೀಗ ಮತ್ತೆ ಅಮಿತಾಬ್ ಬಚ್ಚನ್ ಕನ್ನಡದಲ್ಲಿ ಮನು ನಾಗ್ ನಿರ್ದೇಶನದ ‘ವೈಟ್’ ಕಿರುಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ. ಶ್ರೀ ಸಾಯಿ ಗಗನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಕಿರುಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಹಾಗೂ ರಾಕಿ (ಶ್ವಾನ) ನಟಿಸಿದ್ದಾರೆ. ಇದು ದೃಷ್ಠಿಹೀನತೆಯ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರವಾಗಿದೆ.
ಈ ಕಿರುಚಿತ್ರವನ್ನು ಶ್ರೀಮತಿ ರಾಧಿಕಾ ಯಶ್ ಅವರು ಕಲಾವಿದರ ಸಂಘದಲ್ಲಿ ಮಾರ್ಚ್ 30ರಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ರವಿಚಂದ್ರನ್ ಪುತ್ರರಾದ ಮನೋರಂಜನ್ ಹಾಗೂ ವಿಕ್ರಮ್ ವಿ. ರವಿಚಂದ್ರನ್, ವಿಹಾನ್ ಗೌಡ, ಲಹರಿ ವೇಲು ಅಂದು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಐ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲಯನ್ಸ್ ಕ್ಲಬ್ ಮುಖ್ಯಾಧಿಕಾರಿಗಳು ಕೂಡಾ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.
ಎಸ್. ರಾಜಶೇಖರ್ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಕೆ. ಕಲ್ಯಾಣ್ ಕೆಲವು ಅರ್ಥಗರ್ಭಿತ ಪದಗಳನ್ನು ನೀಡಿದ್ದಾರೆ. ಲೋವ್ ಮೆಹ್ತಾ ಸಂಗೀತ, ಸಿ.ಜಿ. ಜಯದೇವನ್ ಛಾಯಾಗ್ರಹಣ, ನವೀನ್ ಅವರ ಸಂಕಲನ ಈ ಕಿರುಚಿತ್ರಕ್ಕಿದೆ.