ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಯುವನಟನ ಮೃತದೇಹ ಮುಂಬೈನ ಅವರ ನಿವಾಸದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
![Sushanth's first death anniversary](https://etvbharatimages.akamaized.net/etvbharat/prod-images/12124427_sushant-2.jpg)
ಈ ಪ್ರಕರಣ ಬಾಲಿವುಡ್ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಪ್ರಸ್ತುತ ಸಿಬಿಐ ಪ್ರಕರಣದ ಹಿಂದಿನ ಸತ್ಯ ಕಂಡುಹಿಡಿಯುವ ಪ್ರಯತ್ನ ನಡೆಸುತ್ತಿದೆ. ಆದರೆ, ಸುಶಾಂತ್ ನಿಧನರಾಗಿ ಒಂದು ವರ್ಷವಾದರೂ, ಅವರ ಸಾವಿಗೆ ನಿಖರವಾಗಿ ಕಾರಣವೇನು ಎಂಬ ರಹಸ್ಯ ಬಯಲಾಗಿಲ್ಲ.
ಕಳೆದ ವರ್ಷ ಸುಶಾಂತ್ ನಿಧನರಾದಾಗ, ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ವರದಿಯಾದರೂ, ಕೊನೆಗೆ ಇದೊಂದು ಕೊಲೆ ಇರಬಹುದು ಎಂಬ ಶಂಕೆ ಉಂಟಾಯಿತು. ಸುಶಾಂತ್ ಅವರನ್ನು ಕೊಲ್ಲುವುದಕ್ಕೆ ಷಡ್ಯಂತ್ರ ನಡೆದಿರಬಹುದು ಎಂದು ಬಿಂಬಿತವಾಯಿತು. ಇಡೀ ಪ್ರಕರಣಕ್ಕೆ ನೆಪೋಟಿಸಂ ಬಣ್ಣ ಹಚ್ಚಲಾಯಿತು.
![Sushanth's first death anniversary](https://etvbharatimages.akamaized.net/etvbharat/prod-images/12124427_sushantu.jpg)
ಬಾಲಿವುಡ್ ಕೆಲವು ಪ್ರಭಾವಿ ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಸುಶಾಂತ್ ಅವರನ್ನು ತುಳಿದರು. ಅವರ ಸಿನಿ ಜೀವನವನ್ನು ಹಾಳು ಮಾಡಿದರು ಎಂದು ಆರೋಪಿಸಿದರು. ಬಹುಶಃ ಅದೇ ಬೇಸರಕ್ಕೆ ಸುಶಾಂತ್ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ವಾದ ಮುಂದಿಟ್ಟರು.
ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡ ಮೇಲೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಳಕಿಗೆ ಬಂದ ದೊಡ್ಡ ರಹಸ್ಯವೆಂದರೆ, ಸುಶಾಂತ್ ಒಬ್ಬ ಮಾದಕ ವ್ಯಸನಿ ಆಗಿದ್ದರು ಎಂದು. ಕೊನೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದವರು ಸಹ ಈ ವಿಷಯದಲ್ಲಿ ತನಿಖೆ ಪ್ರಾರಂಭಿಸಿ, ಸುಶಾಂತ್ ಅವರ ಗೆಳತಿ ರಿಯಾ ಅವರನ್ನು ಬಂಧಿಸಿ ತನಿಖೆ ನಡೆಸಲಾಯಿತು.
![Sushanth's first death anniversary](https://etvbharatimages.akamaized.net/etvbharat/prod-images/12124427_sushant-3.jpg)
ಆ ನಂತರ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವರನ್ನು ತನಿಖೆ ಮಾಡಲಾಯಿತು. ಹೀಗೆ ಸಾಕಷ್ಟು ಸುದ್ದಿಯಲ್ಲಿದ್ದ ಈ ಪ್ರಕರಣ ಕೊನೆಗೆ ಒಂದು ಹಂತದಲ್ಲಿ ತಣ್ಣಗಾಯಿತು. ಕೆಲವು ದಿನಗಳ ಹಿಂದೆ ಸುಶಾಂತ್ ಅವರ ಆಪ್ತನನ್ನು ಬಂಧಿಸಲಾಗಿದೆ.
ಸುಶಾಂತ್ ಸಾವಿನ ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಬಿಐ ಅಧಿಕಾರಿಗಳು ಇನ್ನೂ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ಅಭಿಮಾನಿಗಳು ಮತ್ತು ಕುಟುಂಬದವರು ಹೋರಾಟ ಮಾಡುತ್ತಿದ್ದಾರೆ.
![Sushanth's first death anniversary](https://etvbharatimages.akamaized.net/etvbharat/prod-images/12124427_sushantftghy.jpg)
"ನ್ಯಾಯ್: ದಿ ಜಸ್ಟೀಸ್":
ಸುಶಾಂತ್ ಅವರ ಜೀವನದ ಆಧಾರಿತ ಚಿತ್ರ "ನ್ಯಾಯ್: ದಿ ಜಸ್ಟೀಸ್" ತೆರೆಗೆ ಬರಲು ಸಜ್ಜಾಗುತ್ತಿದೆ. ಜುಬೇರ್ ಕೆ. ಖಾನ್, ಶ್ರೇಯಾ ಶುಕ್ಲಾ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಸುಶಾಂತ್, ರಿಯಾ ಚಕ್ರವರ್ತಿ ಸೇರಿ ಎಲ್ಲಾ ಪಾತ್ರಗಳಿದ್ದು ಎಲ್ಲರ ಹೆಸರನ್ನು ಬದಲಿಸಲಾಗಿದೆ. ಈ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದೆ.