ಮುಂಬೈ : ಯಾವುದೇ ತಂದೆಗೆ ತನ್ನ ಮಕ್ಕಳು ಜಗತ್ತು ಮೆಚ್ಚುವ ಕೆಲಸ ಮಾಡಿದರೆ ಅದೆಷ್ಟು ಖುಷಿ ಆಗುತ್ತೆ ಅಲ್ವ.. ನಿಜ ತನ್ನ ಮಗ ಜಗತ್ತಿಗೆ ಪರಿಚಯವಾಗಿ, ಹೆಮ್ಮೆಯ ಪುತ್ರನಾದರೆ ಸಾಕು ಅಂತ ಎಲ್ಲಾ ತಂದೆಯಂದಿರು ಹಾತೊರೆಯುತ್ತಾರೆ. ಇದೀಗ ಅಂತಹದ್ದೇ ಒಂದು ಖುಷಿಯಲ್ಲಿ ಬಾಲಿವುಡ್ನ ಚಾಕೊಲೆಟ್ ಬಾಯ್ ಅಂತಾನೆ ಕರೆಸಿಕೊಳ್ಳುವ ಆರ್. ಮಾಧವನ್ ತೇಲುತ್ತಿದ್ದಾರೆ.
ಹೌದು ಬಾಲಿವುಡ್ ನಟ ರಂಗನಾಥನ್ ಮಾಧವನ್ ಪುತ್ರ ವೇದಾಂತ್, ಜೂನಿಯರ್ ನ್ಯಾಷನಲ್ ಸ್ವಿಮ್ ಮೀಟ್ನಲ್ಲಿ ಗೆದ್ದು ಮೂರು ಚಿನ್ನದ ಪದಕಗಳು ಮತ್ತು ಒಂದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿರುವ ಮಾಧವನ್, ಚಿನ್ನದ ಪದಕ ಗೆದ್ದಿದ್ದಕ್ಕೆ ತನ್ನ ಮಗನಿಗೆ ಶುಭ ಕೋರಿದ್ದಾರೆ. ಅಲ್ಲದೆ ದೇವರ ಆಶೀರ್ವದ ಇರಲೆಂದು ಹರಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಮಾಧವನ್, ನನ್ನ ಮಗ ಮೂರು ಚಿನ್ನದ ಪದಕ ಗೆದ್ದಿರುವುದು ಹೆಮ್ಮೆ ಅನಿಸುತ್ತಿದೆ. ಇದು ಅವನ ರಾಷ್ಟ್ರ ಮಟ್ಟದ ಮೊದಲ ಮೆಡಲ್ ಎಂದು ಹೇಳುತ್ತ, ವೇದಾಂತ್ಗೆ ತರಬೇತಿ ನೀಡಿದ ಕೋಚ್ಗಳಿಗೆ ಧನ್ಯವಾದ ತಿಳಿಸಿದ್ದಾರೆ.