ಮುಂಬೈ: ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಪಂಜಾಬ್ನ ಫ್ಲೈಓವರ್ನಲ್ಲಿ ಸುಮಾರು 20 ನಿಮಿಷ ಕಾಲ ಕಳೆದ ಸುದ್ದಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಟಿ, ಪಂಜಾಬ್ನಲ್ಲಿ ಇಂತಹ ಘಟನೆ ನಡೆದಿರುವುದು ನಾಚಿಕೆಗೇಡು. ಗೌರವಾನ್ವಿತ ಪ್ರಧಾನಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿರುವ ನಾಯಕ, ಜನಪ್ರತಿನಿಧಿ. ಅವರು 140 ಕೋಟಿ ಜನರ ಧ್ವನಿಯಾಗಿದ್ದಾರೆ. ಪಂಜಾಬ್ ಈಗ ಉಗ್ರರ ಚಟುವಟಿಕೆಗಳ ತಾಣವಾಗುತ್ತಿದೆ. ಇದನ್ನು ನಿಲ್ಲಿಸದಿದ್ದರೆ, ದೇಶವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದಿದ್ದೇನು?
42,750 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಫಿರೋಜ್ಪುರಕ್ಕೆ ಭೇಟಿ ನೀಡಬೇಕಿತ್ತು. ಫಿರೋಜ್ಪುರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕೆಲ ರೈತ ಪ್ರತಿಭಟನಾಕಾರರು ರಸ್ತೆ ಅಡ್ಡಗಟ್ಟಿದ್ದರು. ಈ ವೇಳೆ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಫ್ಲೈಓವರ್ನಲ್ಲೇ ಸುಮಾರು 20 ನಿಮಿಷಗಳನ್ನು ಕಳೆಯಬೇಕಾಯಿತು.
ಈ ಸುದ್ದಿ ಇದೀಗ ಬಿಜೆಪಿ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರೈತರು ವರ್ಷಪೂರ್ತಿ ಪ್ರತಿಭಟನೆಗೆ ಕುಳಿತಿದ್ರು, ಪ್ರಧಾನಿಗೆ 15 ನಿಮಿಷ ಕಾಯಲು ಆಗಲಿಲ್ಲ: ಸಿಧು