ಬೆಂಗಳೂರು: ಪ್ರಸ್ತುತ ಕೋವಿಡ್-19 ಭಾರತದ ಆರೋಗ್ಯ ಕ್ಷೇತ್ರದ ಚಿತ್ರಣ ಮತ್ತು ಲೆಕ್ಕಾಚಾರವನ್ನು ಅದಲು ಬದಲು ಮಾಡಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಧಿವಾತ ಆರ್ಥರೈಟಿಸ್, ಲುಪುಸ್, ವಾಸ್ಕುಲಿಟಿಸ್, ಸ್ಕ್ಲೆರೋಡರ್ಮಾ ಸೇರಿದಂತೆ ಸೊರಿಯಾಟಿಕ್ ಆರ್ಥರೈಟಿಸ್ಗಳಿಂದ ಬಳಲುತ್ತಿರುವವರು ಸಾಕಷ್ಟು ವಿಶಿಷ್ಟವಾದ ಸವಾಲುಗಳನ್ನು ಎದುರಿಸುವಂತಾಗಿದೆ.
ಈ ರೋಗಗಳು ದೀರ್ಘಕಾಲೀನ ರೋಗಗಳಾಗಿದ್ದು, ದೀರ್ಘಕಾಲದ ಚಿಕಿತ್ಸೆ ಮತ್ತು ಆರೈಕೆಯ ಅಗತ್ಯವಿದೆ. ಅಲ್ಲದೇ, ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ರೋಗದ ಸಕ್ರಿಯತೆ ಮತ್ತು ಚಿಕಿತ್ಸೆಯ ಸುರಕ್ಷತೆಯನ್ನು ಅರಿಯಲು ಆಗಿಂದಾಗ್ಗೆ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇದರ ಜತೆಗೆ ಬಹುತೇಕ ರೋಗಿಗಳು 'ರೋಗನಿರೋಧಕ' ಔಷಧಗಳನ್ನು ಸೇವಿಸುತ್ತಿರುತ್ತಾರೆ ಮತ್ತು ಕೆಲವರು 'ಸ್ಟೆರಾಯ್ಡ್' ನಂತಹ ಔಷಧವನ್ನು ತೆಗೆದುಕೊಳ್ಳುತ್ತಾರೆ.
ಆದರೆ, ಸಂಧಿವಾತ ರೋಗವಿರುವ ರೋಗಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಸೇರಿದಂತೆ ಇನ್ನಿತರೆ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವಿಶೇಷವಾಗಿ ಕೋವಿಡ್-19 ನ ಎರಡನೇ ಅಲೆ "ಯುವ ಸಮುದಾಯದ" ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವ ಈ ಸಂದರ್ಭದಲ್ಲಿ ಇಂತಹ ಸುರಕ್ಷತಾ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಆರ್ಥರಿಟಿಸ್ ರೋಗಿಗಳು ಕೋವಿಡ್-19 ಸೋಂಕಿಗೆ ಒಳಗಾಗಿ ಗುಣಮುಖರಾದ ನಂತರದ ಮೂರು ವಾರಗಳವರೆಗೆ ಯಾವುದೇ ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು ಅಂತಾರೆ ವಿಕ್ರಂ ಹಾಸ್ಪಿಟಲ್ ಹೆಮಟೋಲಾಜಿಸ್ಟ್ ಕನ್ಸಲ್ಟೆಂಟ್ ಡಾ.ರಮೇಶ ಜೋಯಿಸ್.
ಕೊರೊನಾದಿಂದ ಏನೆಲ್ಲ ಸಮಸ್ಯೆ ಎದುರಾಗಿದೆ??
ದೀರ್ಘಕಾಲೀನ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. * ಲಾಕ್ಡೌನ್
* ಆಸ್ಪತ್ರೆಗಳನ್ನು ಮುಚ್ಚಿರುವುದು ಮತ್ತು ಕ್ಲಿನಿಕ್ಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡದಿರುವುದು
* ಸಾರಿಗೆ ವ್ಯವಸ್ಥೆ ಕೊರತೆ ಇರುವುದು
* ಆನ್ಲೈನ್ ಅಥವಾ ಟೆಲಿ ಕನ್ಸಲ್ಟೇಷನ್ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದು
* ಇಂಟರ್ನೆಟ್ ಸೇವೆ ಕಳಪೆಯಾಗಿರುವುದು,
* ನಿಗದಿಯಂತೆ ಆಸ್ಪತ್ರೆಗಳಿಗೆ ತಪಾಸಣೆಗೆ ಹೋಗಲು ಭಯ
* ತಮ್ಮ ರೋಗದ ಬಗ್ಗೆ ಫಾಲೋ-ಅಪ್ ಮಾಡುವಲ್ಲಿ ಮತ್ತು ಔಷಧಿ ತೆಗೆದುಕೊಳ್ಳುವುದರಿಂದ ಹಿಂದೇಟು ಹಾಕುವುದು
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಇದು ಸವಾಲಾಗಿ ಪರಿಣಮಿಸಿದೆ. ಇದರ ಜತೆಗೆ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರುವ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ. ಇದು ಅವರನ್ನು ಹೆಚ್ಚು ಅಪಾಯಕ್ಕೀಡಾಗುವಂತೆ ಮತ್ತು ಆತಂಕಕ್ಕೆ ಒಳಗಾಗುವಂತೆ ಮಾಡಿದೆ ಅಂತಾರೆ
ಡಾ. ರಮೇಶ ಜೋಯಿಸ್.
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳು ತಮ್ಮ ನಿಗದಿತ ಮತ್ತು ನಿರ್ದಿಷ್ಟ ಔಷಧಿಗಳನ್ನು ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಹೈಡ್ರೋಕ್ಲೋರೋಕ್ವೈನ್ ಸಲ್ಫೇಟ್ (ಎಚ್ಸಿಕ್ಯೂಎಸ್) ಅನ್ನು ಲುಪುಸ್ ಮತ್ತು ಸಂಧಿವಾತ ಆರ್ಥರೈಟಿಸ್ ರೋಗಿಗಳು ನಿಯಮಿತವಾಗಿ ಬಳಸುತ್ತಾರೆ. ಸಾಂಕ್ರಾಮಿಕದ ಮೊದಲ ಅಲೆಯ ವೇಳೆ ಎಚ್ಸಿಕ್ಯೂಎಸ್ ಕೋವಿಡ್-19ಗೆ ಚಿಕಿತ್ಸೆ ಮತ್ತು ರೋಗನಿರೋಧಕದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಾಮ ಆರ್ಥರೈಟಿಸ್ ರೋಗಿಗಳಿಗೆ ಅತ್ಯಂತ ಅಗತ್ಯವಿರುವ ಔಷಧವಾಗಿರುವ ಈ ಎಚ್ಸಿಕ್ಯೂಎಸ್ ಪೂರೈಕೆಯಲ್ಲಿ ಭಾರೀ ಕೊರತೆ ಕಂಡುಬರುತ್ತಿದೆ.
ಇದರಿಂದಾಗಿ ರೋಗ ಉಲ್ಬಣಗೊಳ್ಳುತ್ತಿದೆ.
ಪ್ರಸ್ತುತ ತಲೆದೋರಿರುವ ಅಲೆಯಲ್ಲಿ ಟೊಸಿಲಿಝುಮಾಬ್ (Tocilizumab -actemra) ಎಂಬ ಮತ್ತೊಂದು ಔಷಧಕ್ಕೆ ಮಹತ್ವ ನೀಡಲಾಗುತ್ತಿದೆ. ಇದನ್ನು ಸಂಧಿವಾತ, ಮಕ್ಕಳಲ್ಲಿನ ಆರ್ಥರೈಟಿಸ್ (juvenile arthritis) ಮತ್ತು ಇನ್ನೊಂದು ರೋಗವಾದ ಟೆಂಪೋರಲ್ ಆರ್ಥರೈಟಿಸ್ ಚಿಕಿತ್ಸೆಗೆ ಬಳಸಲಾಗುತ್ತದೆ. ಸಾಧಾರಣ ಶ್ವಾಸಕೋಶ ಸಂಬಂಧಿ ರೋಗದಿಂದ ಬಳಲುತ್ತಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಈ ಟೊಸಿಲಿಝುಮಾಬ್ ಬಳಸಬಹುದೆಂದು ಶಿಫಾರಸು ಮಾಡಲಾಗಿದೆ.
ಇದರಿಂದಾಗಿ ಈ ಟೊಸಿಲಿಝುಮಾಬ್ ಔಷಧಿಗೆ ಬೇಡಿಕೆ ಹೆಚ್ಚಾಗಿ, ಕೊರತೆ ಉಂಟಾಗುತ್ತಿದೆ. ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಮತ್ತು ಟೊಸಿಲಿಝುಮಾಬ್ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಔಷಧಿಯ ಕೊರತೆ ಸೃಷ್ಟಿಯಾಗಿದೆ. ಮತ್ತೊಂದು ಆರ್ಥರೈಟಿಸ್ಗೆ ಔಷಧವೆಂದರೆ ಬೆರಿಸಿಟಿನಿಬ್ (Olumiant). ಇದನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಥರೈಟಿಸ್ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಔಷಧವನ್ನು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಈ ಎರಡೂ ಜೆನರಿಕ್ ಅಲ್ಲ ಮತ್ತು ಭಾರತದಲ್ಲಿ ಇವುಗಳ ಉತ್ಪಾದನೆಯಾಗುತ್ತಿಲ್ಲದ ಕಾರಣದಿಂದ ವಿದೇಶಗಳಿಂದ ರಫ್ತು ಮಾಡಿಕೊಳ್ಳಲಾಗುತ್ತಿದೆ. ಇದರ ಪರಿಣಾಮ ಔಷಧಗಳ ಲಭ್ಯತೆ ಕಷ್ಟವಾಗುತ್ತಿದೆ ಎಂದು ಡಾ. ರಮೇಶ ಜೋಯಿಸ್ ವಿವರಿಸಿದರು.
ಪ್ರಸ್ತುತ ಸಾಂಕ್ರಾಮಿಕ ಈ ಸಂದರ್ಭದಲ್ಲಿ ನಮಗಿರುವ ಒಂದೇ ಒಂದು ಆಶಾಕಿರಣವೆಂದರೆ ಲಸಿಕಾಕರಣ. ಸಂಧಿವಾತದಿಂದ ಬಳಲುತ್ತಿರುವವರು ಲಸಿಕೆಯನ್ನು ಪಡೆದುಕೊಳ್ಳುವ ವಿಚಾರದಲ್ಲಿ ಅಲ್ಲಲ್ಲಿ ಅನುಮಾನಗಳು ಮೂಡಿದ್ದವು. ಆದರೆ, ಅಮೆರಿಕನ್ ಕಾಲೇಜ್ ಆಫ್ ಹೆಮಟೋಲಾಜಿಯು ಸಂಧಿವಾತ ಇರುವವರು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವುದು ಸುರಕ್ಷಿತ ಎಂದು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಸಂಧಿವಾತದಿಂದ ಬಳಲುತ್ತಿರುವವರು ಲಸಿಕೆಯನ್ನು ಪಡೆದುಕೊಳ್ಳುವುದು ಸೂಕ್ತ ಮತ್ತು ಸುರಕ್ಷಿತವಾಗಿದೆ ಅಂತ ಮಾಹಿತಿ ನೀಡಿದ್ದಾರೆ.