ಮೈಸೂರು : ಆಸ್ತಿ ವಿಚಾರವಾಗಿ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಶಿವರಾಜ್ ವಿರುದ್ಧ ಕಲ್ಕುಣಿಕೆ ಗ್ರಾಮದ ನಿವಾಸಿ ಬಿ ಎನ್ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ವಾರ್ಡ್ ನಂ. 4ಮತ್ತು 5ರಲ್ಲಿ ಶಿವರಾಜ್ ಹಾಗೂ ಪತ್ನಿ ಧನಲಕ್ಷ್ಮಿ ಸ್ಪರ್ಧೆ ಮಾಡಿದ್ದರು. ಆದರೆ, ಜನರು ಇವರನ್ನು ಹೀನಾಯವಾಗಿ ಸೋಲಿಸಿದ ಕಾರಣದಿಂದ ಗೆದ್ದಿರುವ ಭವ್ಯ ಮತ್ತು ಗಂಡ ಚಂದ್ರಶೇಖರ್ ಮೇಲಿನ ದ್ವೇಷದಿಂದ ಜಗಳ ತೆಗೆದು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅವಿದ್ಯಾವಂತನಾಗಿರುವ ಶಿವರಾಜ್, ಅಮಾಯಕರ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ರೌಡಿಸಂ ಮಾಡಿಕೊಂಡು ಬರುತ್ತಿದ್ದ. ಹೀಗೆ ಕಲ್ಕುಣಿಕೆ ಗ್ರಾಮದಲ್ಲಿ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿದ್ದ. ಇದನ್ನು ತಿಳಿದ ರಾಘವೇಂದ್ರ ಕುಟುಂಬಸ್ಥರು ಪ್ರಶ್ನಿಸಿದಾಗ ಹಲ್ಲೆ ಮಾಡಿದ್ದಾನೆ ಎಂದು ದೂರಿದ್ದಾರೆ.
ಈ ಹಿಂದೆ ಹುಣಸೂರು ಪಟ್ಟಣ ಠಾಣೆಯಲ್ಲಿ ಶಿವರಾಜ್ ಹೆಸರು ರೌಡಿಗಳ ಪಟ್ಟಿಯಲ್ಲಿತ್ತು. ಆದರೆ, ಚುನಾವಣೆಯಲ್ಲಿ ಗೆದ್ದ ನಂತರ ರಾಜಕೀಯ ಪ್ರಭಾವ ಬಳಸಿ ರೌಡಿಶೀಟರ್ ಲಿಸ್ಟ್ನಿಂದ ತನ್ನ ಹೆಸರು ತೆಗೆದು ಹಾಕಿಸಿದ್ದಾನೆ. ಇಂತಹ ವ್ಯಕ್ತಿಯ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸೋಮವಾರ ಮಧ್ಯಾಹ್ನ ಶಿವರಾಜ್ ಸಂಬಂಧಿಕರಿಗೆ ಹೊಡೆದು ರಂಪಾಟ ಮಾಡಿದ್ದ. ನಂತರ ಸಂಜೆ ಮಚ್ಚಿನಿಂದ ಹೊಡೆಯಲು ಯತ್ನಿಸಿದ್ದಾಗ, ಈತನನ್ನು ಗ್ರಾಮಸ್ಥರು ತಡೆದಿದ್ದಾರೆ. ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.