ಚಿಕ್ಕೋಡಿ: ಗಂಡ ಹೆಂಡತಿ ಜಗಳದ ನಡುವೆ ಮಾವ ಸಾವನ್ನಪ್ಪಿರುವ ಘಟನೆ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದಿದೆ.
ಕಳೆದ 15 ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದ ಸೈನಿಕ ಬಾಳೇಶ್ ಬೋರಣ್ಣವರ ಎಂಬುವರಿಗೆ, ಸಿದ್ದಪ್ಪನ ಮಗಳು ಸಂಗೀತಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ, ಈ ಮಹಿಳೆಗೆ ಮಕ್ಕಳಾಗದ ಕಾರಣ ಪತಿ ಆಗಾಗ ಚಿತ್ರಹಿಂಸೆ ನೀಡೋಕೆ ಶುರುಮಾಡಿದ್ದನು. ಇನ್ನೊಂದು ಮದುವೆ ಮಾಡಿಕೋ ಎಂದರೂ ಪೀಡಿಸೋಕೆ ಶುರುಮಾಡಿದ್ದ ಬಾಳೇಶನ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಘಟನೆ ಹಿನ್ನೆಲೆ:
ಮಗಳ ಯೋಗಕ್ಷೇಮ ವಿಚಾರಿಸೋಕೆ ಎಂದು ಸಂಗೀತಾಳ ತಂದೆ ಸಿದ್ದಪ್ಪ ಮಗಳ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಅಳಿಯ ಕೈಯಲ್ಲಿ ಪೈಪ್ ಹಿಡಿದು ಮಗಳನ್ನ ಹೊಡೆಯೋಕೆ ಮುಂದಾಗಿದ್ದಾನೆ. ಇದನ್ನ ಗಮನಿಸಿದ ಈ ಹೆಣ್ಣು ಮಗಳ ತಂದೆ ಸಿದ್ದಪ್ಪ ಜಗಳ ಬಿಡಿಸೋಕೆ ಹೆಣಗಾಡಿದ್ದಾನೆ. ಮಾತು ಕೇಳದ ಅಳಿಯ ಬಾಳೇಶ ಹೆಂಡತಿಗೆ ಹೊಡೆಯಲೆಂದು ಬೀಸಿದ ಹೊಡೆತ ಸಿದ್ದಪ್ಪನ ತಲೆಗೆ ತಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಿದ್ದಪ್ಪನ ಪ್ರಾಣ ಪಕ್ಷಿ ಹಾರಿಹೋಗಿದೆ.