ಕಲಬುರಗಿ: ವನ್ಯಜೀವಿ ಧಾಮಕ್ಕೆ ಅಕ್ರಮವಾಗಿ ನುಸುಳಿ ಆಹಾರ ನೀಡುವ ಮೂಲಕ ಪ್ರಾಣಿಗಳ ಸಾವಿಗೆ ಕಾರಣನಾದ ಆರ್ ಟಿ ಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ಸಿದ್ರಾಮಯ್ಯ ಹಿರೇಮಠ, ಚಿಂಚೋಳಿ ತಾಲೂಕಿನ ಕೊಂಚಾವರಂ ಕಾಯ್ದಿಟ್ಟ ವನ್ಯಜೀವಿ ಧಾಮಕ್ಕೆ ಅಕ್ರಮವಾಗಿ ನುಸುಳಿ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಸಾವಿಗೆ ಕಾರಣವಾಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಸೆಕ್ಷನ್ 27 ಮತ್ತು 51 ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಸಿದ್ರಾಮಯ್ಯ ಹಿರೇಮಠ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.