ವಾಷಿಂಗ್ಟನ್ (ಅಮೆರಿಕ): 2024 ರ ಅಧ್ಯಕ್ಷೀಯ ಚುನಾವಣೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಗಳಿಲ್ಲ ಎಂದು ಭಾರತೀಯ ಅಮೆರಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಕಳೆದ ತಿಂಗಳು ನಡೆದ ರಿಪಬ್ಲಿಕನ್ ಪ್ರಾಥಮಿಕ ಚರ್ಚೆಯ (Republican primary debate) ನಂತರ ತನ್ನ ಪ್ರಚಾರದ ವೇಗ ಹೆಚ್ಚಿಸಿಕೊಂಡಿರುವ ಹ್ಯಾಲೆ ಟ್ರಂಪ್ ಬಗ್ಗೆ ಮಾತನಾಡಿದ್ದಾರೆ.
ದಿ ವಾಲ್ ಸ್ಟ್ರೀಟ್ ಜರ್ನಲ್ ಬಿಡುಗಡೆ ಮಾಡಿದ ಇತ್ತೀಚಿನ ಚುನಾವಣಾ ಸಮೀಕ್ಷೆಯು, 51 ವರ್ಷದ ಹ್ಯಾಲೆ ಜನಪ್ರಿಯತೆಯ ರೇಟಿಂಗ್ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಬಹಿರಂಗಪಡಿಸಿದೆ. ಟ್ರಂಪ್ ಮತ್ತು ರಾನ್ ಡಿಸಾಂಟಿಸ್ ನಂತರದ ಸ್ಥಾನದಲ್ಲಿ ಹ್ಯಾಲೆ ಇದ್ದಾರೆ ಎಂದು ಅದು ಹೇಳಿದೆ. ಅವರ ಸಹವರ್ತಿ ಮತ್ತೋರ್ವ ಭಾರತೀಯ ಅಮೆರಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
"ಮಾಜಿ ಅಧ್ಯಕ್ಷ ಟ್ರಂಪ್ ಅಭ್ಯರ್ಥಿಯಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನಾನೇ ಅಭ್ಯರ್ಥಿಯಾಗಲಿದ್ದೇನೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಆದರೆ ಏನೇ ಆದರೂ ಯಾವುದೇ ರಿಪಬ್ಲಿಕನ್ ಅಭ್ಯರ್ಥಿಯು ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ಗಿಂತ ಉತ್ತಮವಾಗಿರುತ್ತಾರೆ ಎಂದು ನಾನು ಹೇಳ ಬಯಸುತ್ತೇನೆ" ಎಂದು ಹ್ಯಾಲೆ ಭಾನುವಾರ ಸಿಬಿಎಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಎಲ್ಲಾ ಪ್ರಮುಖ ರಾಷ್ಟ್ರೀಯ ಸಮೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ವಿಶ್ಲೇಷಕ ಸಂಸ್ಥೆಯಾಗಿರುವ ರಿಯಲ್ ಕ್ಲಿಯರ್ ಪಾಲಿಟಿಕ್ಸ್ (Real Clear Politics) ಪ್ರಕಾರ, ಇಂಥ ಎಲ್ಲ ಸಮೀಕ್ಷೆಗಳ ಸರಾಸರಿಯ ಪಟ್ಟಿಯಲ್ಲಿ ಟ್ರಂಪ್ 53.6 ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಡೆಸಾಂಟಿಸ್ (13 ಶೇಕಡಾ), ರಾಮಸ್ವಾಮಿ (7.1 ಶೇಕಡಾ) ಮತ್ತು ಹ್ಯಾಲೆ (6 ಶೇಕಡಾ) ನಂತರದ ಸ್ಥಾನದಲ್ಲಿದ್ದಾರೆ.
ಅಧ್ಯಕ್ಷ ಬೈಡನ್ ಅವರಿಗೆ ಮತ ಹಾಕಿದರೆ ಅದು ವೈಸ್ ಪ್ರೆಸಿಡೆಂಟ್ ಹ್ಯಾರಿಸ್ಗೆ ಮತ ಹಾಕಿದಂತೆ ಎಂದು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ಹ್ಯಾಲೆ ಹೇಳಿದ್ದಾರೆ. "ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಅವರು ನಿರಪರಾಧಿ. ಆದರೆ ಅಮೆರಿಕದ ಜನರು ಬುದ್ಧಿವಂತರಲ್ಲ ಎಂದು ನೀವು ಹೇಳುತ್ತಿರುವಿರಿ. ಅಮೆರಿಕದ ಜನ ಶಿಕ್ಷೆಗೊಳಗಾದ ಅಪರಾಧಿಗೆ ಮತ ಚಲಾಯಿಸಲು ಬಯಸುವುದಿಲ್ಲ. ಅಮೆರಿಕದ ಜನರು ಜನರಲ್ ಚುನಾವಣೆಯನ್ನು ಗೆಲ್ಲಬಲ್ಲ ಯಾರಿಗೇ ಆದರೂ ಮತ ಚಲಾಯಿಸಲಿದ್ದಾರೆ. ಅಮೆರಿಕದ ಜನರ ಮೇಲೆ ನನಗೆ ನಂಬಿಕೆ ಇದೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಆದ್ದರಿಂದ, ನಾನು ಯಾವಾಗಲೂ ರಿಪಬ್ಲಿಕನ್ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಅಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಯಾರನ್ನಾದರೂ ನಾವು ಆಯ್ಕೆ ಮಾಡಲಿದ್ದೇವೆ ಎಂದು ನಾನು ಖಚಿತಪಡಿಸುತ್ತೇನೆ. ಏಕೆಂದರೆ ನಾವು ಅಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅವರನ್ನು ನೋಡಲು ಬಯಸುವುದಿಲ್ಲ. ಒಂದು ವೇಳೆ ಹಾಗೆ ಆದರೆ ನಮ್ಮ ದೇಶ ನಮಗೆ ಸಿಗಲಾರದು" ಎಂದು ಅವರು ಹೇಳಿದರು.
ಇದನ್ನೂ ಓದಿ : ರಾಜನಾಥ್ ಸಿಂಗ್ ಭೇಟಿ ಮುಂದೂಡಿಕೆ; ಶ್ರೀಲಂಕಾಗೆ ಭಾರತ ಎಚ್ಚರಿಕೆಯ ಸಂದೇಶ!