ಕೊಲಂಬೊ(ಶ್ರೀಲಂಕ): ಕೊರೊನಾ ವೈರಸ್ ತಂದೊಡ್ಡಿದ ಸಂಕಷ್ಟದಿಂದಾಗಿ ಮದುವೆಗೆ ಖರ್ಚು ಮಾಡುವ ಹಣವನ್ನು ನವವಿವಾಹಿತರೊಬ್ಬರು ಬಡವರಿಗೆ ನೀಡಿದ್ದಾರೆ.
ಕೊರೊನಾ ವೈರಸ್ ವಿಶ್ವವ್ಯಾಪಿ ಹರಡುವ ಮುನ್ನವೇ ದರ್ಶನ ಕುಮಾರ ವಿಜೇನಾರಾಯಣ ಮತ್ತು ಅವರ ಪ್ರೇಯಸಿ ಪವಾನಿ ರಸಂಗ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಕರೊನಾ ರೋಗ ಎಲ್ಲೆಡೆ ಹಬ್ಬಿದ ಹಿನ್ನೆಲೆ, ಈ ಮದುವೆಯನ್ನು ಮುಂದೂಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು. ಆದರೆ ನಿಶ್ಚಯವಾದ ಮದುವೆಯನ್ನು ಮುಂದೂಡಲು ಮನಸ್ಸಿಲ್ಲದ ಈ ಇಬ್ಬರು, ನಿಗದಿಯಾದ ದಿನಾಂಕದಂದು ಸರಳವಾಗಿ ಮದುವೆ ಆಗಿದ್ದಾರೆ.
ಈ ಮೊದಲು ಮದುವೆಗೆಂದು 250 ಕ್ಕೂ ಹೆಚ್ಚು ಅತಿಥಿಗಳನ್ನು ಕರೆಯಲಾಗಿತ್ತು ಹಾಗೂ ವಿಜೃಂಭಣೆಯಿಂದ ಮದುವೆ ಮಾಡಲು ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ ನವಜೋಡಿಗಳು ಸರಳವಾಗಿ ಕೇಕ್ ಕತ್ತರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಮೀಸಲಿಟ್ಟ ಹಣವನ್ನೆಲ್ಲಾ ಬಡವರಿಗೆ ನೀಡುವ ಮೂಲಕ ಮದುವೆಯ ಸಾರ್ಥಕತೆಗೆ ಅರ್ಥ ನೀಡಿದ್ದಾರೆ.