ಹೈದರಾಬಾದ್: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಇರಾನ್ ಮತ್ತು ಭಾರತದಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರದಿಂದ ತಮ್ಮ ದೇಶದ ಪ್ರಜೆಗಳನ್ನು ಸ್ವದೇಶಗಳಿಗೆ ಸುರಕ್ಷಿತವಾಗಿ ಮರಳಿಸುವ ಕ್ರಮಕ್ಕೆ ಮುಂದಾಗಿರುವುದು ಸಮಾಧಾನದ ಸಂಗತಿ. ಇದು ಇರಾನಿನ ರಾಜಧಾನಿಯಾದ ಟೆಹ್ರಾನಿನಲ್ಲಿರುವ 240 ಮಂದಿ ಕಾಶ್ಮೀರಿ ವಿದ್ಯಾರ್ಥಿಗಳೂ ಒಳಗೊಂಡಂತೆ ಹಲವಾರು ಜನರಿಗೆ ನೆಮ್ಮದಿ ತಂದಿದೆ.
ಶನಿವಾರ ಮುಂಜಾನೆ ಭಾರತೀಯ ನಾಗರಿಕರನ್ನು ಹೊತ್ತ ಮೊದಲ ವಿಮಾನ ಟೆಹರಾನ್ ಇಕಿಯಾ ವಿಮಾನ ನಿಲ್ದಾಣವನ್ನು ಬಿಟ್ಟು ನವದೆಹಲಿ ಸೇರಲಿದೆ. ಈ ಮೊದಲು ಭಾರತೀಯ ನಾಗರಿಕರನ್ನು ಭಾರತಕ್ಕೆ ಕಳಿಸುವ ಮೊದಲು ಇರಾನಿನಲ್ಲೇ ಪರೀಕ್ಷೆ ನಡೆಸಲು ಇರಾನ್ ಒಪ್ಪಿಕೊಂಡಿತ್ತು. ಅದಕ್ಕನುಗುಣವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಆರೋಗ್ಯ ಸಚಿವಾಲಯದಿಂದ ಆರು ಮಂದಿ ತಜ್ಞರನ್ನು ಟೆಹ್ರಾನ್ಗೆ ಕಳಿಸಿ ಅಲ್ಲಿ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ವೀಸಾ ಒದಗಿಸಲಾಯಿತು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಸ್ವ್ಯಾಬ್ಗಳು ದೆಹಲಿ ತಲುಪಿದೊಡನೆ ಕೋವಿಡ್ 19ರ ತಪಾಸಣೆಯಲ್ಲಿ ನೆಗೆಟಿವ್ ಫಲಿತಾಂಶ ತೋರಿದ ಭಾರತೀಯ ನಾಗರಿಕರನ್ನು ಮರಳಿ ಭಾರತಕ್ಕೆ ಕಳಿಸಲಾಗುವುದು. ತಪಾಸೆಣೆಯಲ್ಲಿ ಪಾಸಿಟಿವ್ ಫಲಿತಾಂಶ ಕಂಡಲ್ಲಿ ಅಂತಹ ನಾಗರಿಕರನ್ನು ಇರಾನ್ ಸರ್ಕಾರದ ಆರೋಗ್ಯ ಇಲಾಖೆ ನಿಯೋಜಿಸಿರುವ ಅತ್ಯಾಧುನಿಕ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗುತ್ತದೆ.
ಫೆ. 26ರಂದು ಭಾರತೀಯ DGCAಯು ಇರಾನಿನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ ತಕ್ಷಣದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸರ್ಕಾರವು ಮಾನವೀಯ ಅಂಶವನ್ನು ಗಮನದಲ್ಲಿರಿಸಿಕೊಂಡು ಹಾಗೂ ವಿಷಯದ ಗಂಭೀರತೆಯನ್ನು ಪರಿಗಣಿಸಿಕೊಂಡು ಎರಡೂ ಕಡೆಗಳಲ್ಲಿ ಸಿಲುಕಿಕೊಂಡ ಪ್ರಜೆಗಳನ್ನು ಖಾಲಿ ಮಾಡಿಸುವ ಕೆಲಸಕ್ಕಾಗಿಯೇ ಕೆಲವು ವಿಶೇಷ ವಿಮಾನಗಳನ್ನು ಮೀಸಲಿಡಲು ತಾನು ಸಿದ್ಧವಿರುವುದಾಗಿ ತಿಳಿಸಿತು. ಎಲ್ಲಾ ಆರೋಗ್ಯ ಶಿಷ್ಟಾಚಾರಗಳನ್ನು ಗಮನಕ್ಕೆ ತೆಗೆದುಕೊಂಡು ವಿದೇಶಾಂಗ ಕಚೇರಿಯು ಅಧಿಕೃತವಾಗಿ ಹೇಳಿಕೆ ನೀಡಿತು.
ಟೆಹ್ರಾನಿನಿಂದ ಹೊರಡುವ ವಿಮಾನವು ದೆಹಲಿ ತಲುಪಿ ಪುನಃ ಇರಾನಿ ಪ್ರಜೆಗಳನ್ನು ಹೊತ್ತುಕೊಂಡು ತಮ್ಮ ದೇಶಕ್ಕೆ ಮರಳಲಿದೆ. ಇದೇ ಹೊತ್ತಿಗೆ ನವದೆಹಲಿ ಮತ್ತು ಮುಂಬೈಗೆ ಮತ್ತಷ್ಟು ವಿಮಾನಗಳನ್ನು ಕಳಿಸಿ ಪ್ರಜೆಗಳನ್ನು ತಮ್ಮ ದೇಶಗಳಿಗೆ ಮುಟ್ಟಿಸಬೇಕಾದ ಕುರಿತು ಚರ್ಚೆಗಳು ನಡೆಯುತ್ತಿವೆ. ಎರಡೂ ದೇಶಗಳ ನಡುವೆ ಸೀಮಿತ ಸಂಖ್ಯೆಯ ವಾಣಿಜ್ಯ ವಿಮಾನಗಳನ್ನು ಮರಳಿ ಆರಂಭಿಸುವ ವಿಧಾನಗಳೇನಾಗಿರಬೇಕು ಎಂದೂ ಚಿಂತನೆ ನಡೆಸಲಾಗುತ್ತಿದೆ. “ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳನ್ನೊಳಗೊಂಡಂತೆ ಎಲ್ಲಾ ನಾಗರಿಕರಿಗೆ ಪ್ರಸಕ್ತ ಗಂಭೀರ ಸನ್ನಿವೇಶದಲ್ಲಿ ಜಾಗತಿಕವಾಗಿ ಸಂಯೋಜಿತ ಕ್ರಿಯೆಗಳ ಮೂಲಕ ಅವರಿಗೆ ಉಂಟಾಗಿರುವ ಆತಂಕ ಸಮಸ್ಯೆಗಳನ್ನು ನಿವಾರಿಸಲು ಎರಡೂ ದೇಶಗಳು ತಮ್ಮ ನಡುವಿನ ಆಪ್ತ ಸಂಬಂಧವನ್ನು ಮುಂದುವರೆಸುತ್ತಲೇ ಪ್ರಯತ್ನ ನಡೆಸಲಿವೆ” ಎಂದು ರಾಯಭಾರ ಕಚೇರಿಯಿಂದ ಹೇಳಿಕೆ ಹೊರಬಂದಿದೆ.
ಕೊರೊನಾ ವೈರಸ್ನಿಂದ ಬಾಧಿತರಾದ ಕೆಲ ಭಾರತೀಯ ಪ್ರಜೆಗಳನ್ನು ದೇಶದಿಂದ ಬಲವಂತದಿಂದ ಕಳಿಸಲಾಗುತ್ತಿದೆ ಎಂಬ ವರದಿಯು ಸುಳ್ಳು ಮಾಹಿತಿಯಾಗಿದ್ದು ಆಧಾರ ರಹಿತವಾಗಿದೆ ಅಂತಹ ಯಾವುದೇ ಪ್ರಯತ್ನಗಳನ್ನು ಇರಾನ್ ಸರ್ಕಾರ ನಡೆಸಿಲ್ಲ ಎಂದು ಇರಾನಿನ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಇರಾನಿನ ವಿದೇಶಾಂಗ ಸಚಿವ ಜಾರಿಫ್ ಮತ್ತು ನಂತರ ಇರಾನಿನ ಮಹಾನಾಯಕ ಖಮೇನಿ ತಮ್ಮ ಟ್ವೀಟುಗಳ ಮೂಲಕ ‘ಮುಸ್ಲಿಮರನ್ನು ಕೊಲ್ಲಲಾಗುತ್ತಿದೆ” ಎಂಬಂತಹ ಟೀಕಾತ್ಮಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಎರಡೂ ದೇಶಗಳ ಸಂಬಂಧದಲ್ಲಿ ವಿರಸಮಯ ಸನ್ನಿವೇಶ ಉಂಟಾಗಿತ್ತು. ಇದರಿಂದ ಅಸಮಧಾನಗೊಂಡಿದ್ದ ಇರಾನ್ ರಾಯಭಾರಿ ಅಧಿಕಾರಿಗಳನ್ನು ಕರೆಸಿಕೊಂಡಿತ್ತು.