ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ಸಿನಿಮಾವೊಂದರ ಶೂಟಿಂಗ್ಗಾಗಿ ಹೈದರಾಬಾದ್ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಮತ್ತು ಗ್ರೀನ್ ಇಂಡಿಯಾ ಸಂಸ್ಥಾಪಕ ಜೆ.ಸಂತೋಷ್ ಕುಮಾರ್ ಅವರೊಂದಿಗೆ ಗ್ರೀನ್ ಇಂಡಿಯಾ ಚಾಲೆಂಜ್ 5.0ನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಸಾಥ್ ಕೊಟ್ಟರು.

ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾಣದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ನಟ, ಗಿಡ ನೆಡುವ ಕಾರ್ಯಕ್ರಮದ ಜವಾಬ್ದಾರಿಯನ್ನು ಈ ನೆಲದ ಪ್ರತಿಯೊಬ್ಬ ವ್ಯಕ್ತಿಯೂ ವಹಿಸಿಕೊಳ್ಳಬೇಕು. ದೊಡ್ಡ ಮರಗಳನ್ನು ಬೆಳೆಸುವವರೆಗೆ ಆ ಸಸಿಗಳನ್ನು ಸಮರ್ಪಕವಾಗಿ ಆರೈಕೆ ಮಾಡಬೇಕು ಎಂದು ಹೇಳಿದರು.

ಗ್ರೀನ್ ಇಂಡಿಯಾ ಚಾಲೆಂಜ್ ಸೇರಲು ಮತ್ತು ದೊಡ್ಡ ಪ್ರಮಾಣದಲ್ಲಿ ಸಸಿಗಳನ್ನು ನೆಡಲು ತಮ್ಮ ಅಭಿಮಾನಿಗಳು ಹಾಗೂ ಅನುಯಾಯಿಗಳಿಗೆ ಇದೇ ವೇಳೆ ಅವರು ಕರೆ ಕೊಟ್ಟರು.

ತಮ್ಮ ಕೋರಿಕೆ ಸ್ವೀಕರಿಸಿ ಗ್ರೀನ್ ಇಂಡಿಯಾ ಚಾಲೆಂಜ್ಗೆ ಸೇರ್ಪಡೆಗೊಂಡಿದ್ದಕ್ಕಾಗಿ ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಕೂಡ ಬಾಲಿವುಡ್ ನಟನಿಗೆ ಧನ್ಯವಾದ ತಿಳಿಸಿದ್ದಾರೆ. ಸಸಿಗಳನ್ನು ನೆಡುವ ಬಾಲಿವುಡ್ ತಾರೆಯರ ಕೆಲಸ ಅವರ ಕೋಟ್ಯಂತರ ಅಭಿಮಾನಿಗಳಿಗೆ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನದಡಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಭಾಗಿಯಾಗಿದ್ದರು. ಅದಕ್ಕೂ ಮುನ್ನ ನಟ ಅಜಯ್ ದೇವಗನ್ ಯಾದಾದ್ರಿ ಭುವನೇಶ್ವರ ಜಿಲ್ಲೆಯ ಚೌತೌಪಾಲ್ನ ಗ್ರೀನ್ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಸಸಿಗಳನ್ನು ನೆಟ್ಟಿದ್ದರು.
ಇದನ್ನೂ ಓದಿ: ಮತ್ತೆ ಗ್ರೀನ್ ಇಂಡಿಯಾ ಚಾಲೆಂಜ್ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್