ಬೆಂಗಳೂರು: ಹೆಣ್ಣುಮಗು ಎಂಬ ಕಾರಣಕ್ಕಾಗಿಯೇ ತಂದೆಯೊಬ್ಬ ಐದು ವರ್ಷದ ಮಗಳನ್ನು ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಮಗುವಿನ ತಂದೆಯನ್ನು ಹೆಚ್ಎಎಲ್ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

ತೆಲಂಗಾಣ ಪ್ರಕಾಶಂ ಜಿಲ್ಲೆಯ ವೆಂಕಟೇಶ್ವರ್ ರಾವ್ ಬಂಧಿತ ಆರೋಪಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವೆಂಕಟೇಶ್ವರ್ 2016 ರಲ್ಲಿ ನಯನ ಎಂಬುವರ ಜೊತೆ ವಿವಾಹ ಮಾಡಿಕೊಂಡಿದ್ದರು. ನಯನ ಕುಟುಂಬಸ್ಥರು ಹೆಚ್ಎಎಲ್ನ ರೆಡ್ಡಿಪಾಳ್ಯದ ನಿವಾಸಿಗಳಾಗಿದ್ದಾರೆ. ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದ್ದು, ಕಳೆದ 10 ದಿನಗಳ ಹಿಂದೆ ಎರಡನೇ ಹೆಣ್ಣು ಮಗು ಜನನವಾಗಿತ್ತು.
ಓದಿ: 3 ವರ್ಷದ ಬಾಲಕಿ ನಾಪತ್ತೆ.. ಮಗಳನ್ನು 500ರೂ.ಗೆ ಮಾರಾಟ ಮಾಡಿರುವ ಬಗ್ಗೆ ತಂದೆಯ ಆತಂಕ
ಮದುವೆಯಾದ ಆರಂಭದಿಂದಲೂ ವರದಕ್ಷಿಣೆಗಾಗಿ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಮೊದಲ ಹೆಣ್ಣು ಮಗುವಾದಾಗಲು ಗಂಡು ಮಗುವಾಗಬೇಕೆಂದು ಹಿಂಸೆ ನೀಡಿದ್ದರು. ಎರಡನೇ ಮಗು ಸಹ ಹೆಣ್ಣಾಗಿದ್ದರಿಂದ ಗಂಡನ ಮನೆಯವರ ಕಿರುಕುಳ ಹೆಚ್ಚಾಯ್ತು ಎಂದು ನಯನಾ ಆರೋಪಿಸಿದ್ದಾರೆ.
ಮಗುವಾದ ಬಳಿಕ ವೆಂಕಟೇಶ್ವರ ರಾವ್ ತನ್ನ ಹೆಂಡ್ತಿ ನಯನಾ ಮನೆಗೆ ತೆರಳಿದ್ದರು. ಈ ವೇಳೆ ಮಗುವಿನ ವಿಚಾರದಲ್ಲಿ ಇಬ್ಬರು ಪರಸ್ಪರ ಜಗಳವಾಡಿದ್ದರು. ಬಳಿಕ ಮೊದಲ ಮಗಳನ್ನು ನೋಡಿ, ಆಕೆಯ ಕತ್ತು ಹಿಸುಕಿ ಸಾಯಿಸಲು ವೆಂಟೇಶ್ವರ್ ಮುಂದಾಗಿದ್ದರು. ಇದನ್ನು ಗಮನಿಸಿದ್ದ ಪತ್ನಿ ನಯನಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.