ತುಮಕೂರು : ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದ ವೃದ್ಧೆಯನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ.
ಸುಮಾರು 60 ವರ್ಷ ವಯಸ್ಸಿನ ಮೀನಾಕ್ಷಮ್ಮ ಎಂಬುವರು ಇಂದು ಬೆಳಗ್ಗೆ ಪಟ್ಟಣದ ಕೆ.ಆರ್. ಬಡಾವಣೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗದ ಅಶ್ವಥಪ್ಪ ಎಂಬುವರಿಗೆ ಸೇರಿದ ಅಡಕೆ ತೋಟದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದರು.
ಬಾವಿಯಲ್ಲಿದ್ದ ಕಲ್ಲುಗಳ ಸಹಾಯದಿಂದ ನೀರಿನಲ್ಲಿ ಮುಳುಗದೆ ಮೀನಾಕ್ಷಮ್ಮ ಪ್ರಾಣ ಕಾಪಾಡಿಕೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಏಣಿ ಬಳಸಿ ಅವರನ್ನು ಮೇಲಕ್ಕೆತ್ತಿದ್ದಾರೆ. ಈ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.