ತುಮಕೂರು: ಪತ್ನಿಯ ಎದುರೇ ಆಕೆಯ ಪತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದ 7 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳೆಲ್ಲರೂ ಬೆಂಗಳೂರಿನ ಬಾಗಲಗುಂಟೆಯವರಾಗಿದ್ದು, ಎಲ್ಲರೂ 28 ವರ್ಷ ವಯಸ್ಸಿನ ಒಳಗಿನವರಾಗಿದ್ದಾರೆ. ಆರೋಪಿಗಳ ಮೇಲೆ ಈಗಾಗಲೇ ಪೀಣ್ಯಾ, ಬಾಗಲಗುಂಟೆ, ದಾಬಸ್ ಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಕೊಲೆ ಪ್ರಕರಣಗಳು ದಾಖಲಾಗಿವೆ. ಹಂತಕರಿಂದ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಕಾರು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಸೆಂಬರ್ 12ರಂದು ಸಂಜೆ 6 ಗಂಟೆ ಸಮಯದಲ್ಲಿ ನವವಿವಾಹಿತರಾದ ಶ್ರೀನಿವಾಸ್ ಮತ್ತು ಅಕ್ಷತಾ ಕಾರಿನಲ್ಲಿ ಕೊರಗಟಗೆರೆ-ದಾಬಸ್ ಪೇಟೆ ಮಾರ್ಗವಾಗಿ ತೆರಳುತ್ತಿದ್ದರು. ಜಿ.ನಾಗೇನಹಳ್ಳಿ ಗೊಲ್ಲರಹಟ್ಟಿ ಬಳಿ ಹಿಂಬಾಲಿಸಿಕೊಂಡು ಬಂದಿದ್ದ 7 ಜನ ಹಂತಕರ ತಂಡ, ಶ್ರೀನಿವಾಸ್ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿತ್ತು. ಬಳಿಕ ಹಂತಕರ ಬೇಟೆಗೆ ಮಧುಗಿರಿ ಡಿಎಸ್ಪಿ ಪ್ರವೀಣ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ತನಿಖಾ ತಂಡವನ್ನು ರಚಿಸಿದ್ದರು. ಅಕ್ಷತಾ ನೀಡಿದ್ದ ಸುಳಿವಿನ ಮೇರೆಗೆ ಕಾರು ಸಹಿತ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೊರಟಗೆರೆ ಬಳಿ ಯುವಕ-ಯುವತಿ ಮೇಲೆ ಹಲ್ಲೆ... ಯುವಕನ ಬರ್ಬರ ಕೊಲೆ
ಕೊಲೆ ಪ್ರಕರಣದ ಮೊದಲ ಆರೋಪಿ ರಂಜಿತ್ ಮತ್ತು ಕೊಲೆಯಾಗಿರೋ ಶ್ರೀನಿವಾಸ್ ನಡುವಿನ ಹಳೇ ದ್ವೇಷವೇ ಹತ್ಯೆಗೆ ಕಾರಣ ಅನ್ನೋದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ