ಶಿವಮೊಗ್ಗ: ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಷಡಕ್ಷರಿ ಅವರು ಶಿವಮೊಗ್ಗ ಜಿಲ್ಲಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ನ ಸಲಹಾ ಸಮಿತಿಯ ಸಭೆ ನಡೆಸಿದರು.
ಜಿಲ್ಲಾ ಬ್ಯಾಂಕ್ ಸಭಾಂಗಣದಲ್ಲಿ ಸಭೆ ನಡೆಸಿ, ಈ ವೇಳೆ ಜಿಲ್ಲೆಯಲ್ಲಿ ಸಾಲ ನೀಡಿಕೆ, ಸಾಲ ವಸೂಲಾತಿ ಹಾಗೂ ಇನ್ನಿತರ ವಿಚಾರಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ರಾಜ್ಯ ಸರ್ಕಾರ ರೈತರಿಗಾಗಿಯೇ ಹೊಸ ಯೋಜನೆ ಜಾರಿಗೆ ತಂದಿದೆ. ನಮ್ಮ ಬ್ಯಾಂಕ್ನಲ್ಲಿ ಸಾಲ ಪಡೆದ ರೈತರು ತಮ್ಮ ಸಾಲವನ್ನು ಮರುಪಾವತಿ ಮಾಡಿದರೆ ಅವರ ಬಡ್ಡಿ ಸಂಪೂರ್ಣ ಮನ್ನಾ ಮಾಡಲಾಗುತ್ತದೆ ಎಂದರು.
ಈ ಯೋಜನೆಯು ಮಾರ್ಚ್ವರೆಗೆ ಮಾತ್ರ ಎಂದು ಘೋಷಣೆ ಮಾಡಲಾಗಿತ್ತು, ಆದರೆ ಕೊರೊನಾದಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದರಿಂದ ಸಾಲ ಮರುಪಾವತಿ ಬಡ್ಡಿಮನ್ನಾ ಯೋಜನೆಯನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಷಡಕ್ಷರಿಯವರು ರೈತರಲ್ಲಿ ವಿನಂತಿ ಮಾಡಿದ್ದಾರೆ.
ರಾಜ್ಯದಲ್ಲಿ 366 ಕೋಟಿ ಸಾಲವಿದ್ದು, 366 ಕೋಟಿ ರೂ. ಬಡ್ಡಿ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ 3.136 ರೈತರು ಸಾಲ ಪಡೆದಿದ್ದು, 17 ಕೋಟಿ 6 ಲಕ್ಷ ರೂ. ಬಾಕಿ ರೈತರು ಕಟ್ಟಬೇಕಿದೆ. ಇದರ ಬಡ್ಡಿ 20 ಕೋಟಿ 87 ಲಕ್ಷ ರೂ.ಗಳಿದೆ. ರೈತರು ಅಸಲನ್ನು ಕಟ್ಟಿ ಬಡ್ಡಿ ಮನ್ನಾ ಮಾಡಿ ಕೊಳ್ಳಬೇಕಿದೆ ಎಂದರು. ಈ ವೇಳೆ ಜಿಲ್ಲಾ ವ್ಯವಸ್ಥಾಪಕ ಟೀಕಪ್ಪ ಸೇರಿ ಇತರರು ಹಾಜರಿದ್ದರು.