ಶಿವಮೊಗ್ಗ: ಕೋವಿಡ್ನಿಂದಾಗಿ ಪ್ರವಾಸೋದ್ಯಮ ಭಾರಿ ಕುಸಿತ ಕಂಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ನೇಪಾಳ ಆರ್ಥಿಕ ಸಮಸ್ಯೆ ಎದುರಿಸಿದ್ದನ್ನೇ ನಾವು ಕಾಣಬಹುದಾಗಿದೆ. ಪ್ರವಾಸೋದ್ಯಮದಲ್ಲಿ ಇತ್ತಿಚಿನ ದಿನಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕೋವಿಡ್ನ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಪ್ರವಾಸಿ ತಾಣಗಳನ್ನು ತೆರೆಯಲಾಗಿದೆ.
ಇದರಿಂದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದಾರೆ. ನವೆಂಬರ್ನಿಂದ ಜನವರಿವರೆಗೆ ಪ್ರವಾಸಕ್ಕೆ ಸೂಕ್ತ ಕಾಲವಾಗಿದ್ದು, ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಆದರೆ, ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಶೇಕಡಾ 30 ರಷ್ಟು ಕಡಿಮೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳುತ್ತದೆ.
ಕವಿ ಮನೆ, ಜಲಪಾತ, ಬೆಟ್ಟ ಗುಡ್ಡಗಳ ಟ್ರಕ್ಕಿಂಗ್, ರಿವರ್ ರ್ಯಾಪ್ಟಿಂಗ್, ಪಕ್ಷಿಧಾಮ ಮತ್ತು ಪ್ರಾಣಿಧಾಮಗಳಂತಹ 52ಕ್ಕೂ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಶಿವಮೊಗ್ಗದ ಪ್ರವಾಸೋದ್ಯಮದಲ್ಲಿ ಚೇತರಿಕೆ ಕಂಡಿದೆ. ಜೋಗ, ಸಿಗಂದೂರು, ಹುಲಿ- ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ. ಶಿವಪ್ಪ ನಾಯಕ ಅರಮನೆ, ಕೆಳದಿ ದೇವಾಲಯ, ಚಂದ್ರಗುತ್ತಿ ದೇವಾಲಯ, ಗುಡವಿ ಪಕ್ಷಿಧಾಮ, ಕುಪ್ಪಳ್ಳಿ ವಸ್ತು ಸಂಗ್ರಹಾಲಯ ಒಳಗೊಂಡಿವೆ. ಈ ಮೇಲಿನ ಎಲ್ಲ ಪ್ರವಾಸಿತಾಣಗಳಿಗೆ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಹುಲಿ ಮತ್ತು ಸಿಂಹಧಾಮ ಕೋವಿಡ್ ನಂತರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಪ್ರತಿ ತಿಂಗಳು ಸರಾಸರಿ 40 ರಿಂದ 50 ಸಾವಿರ ತನಕ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವರ್ಷ ನವೆಂಬರ್ನಲ್ಲಿ 1,81,323, ಡಿಸೆಂಬರ್ನಲ್ಲಿ 26,228, ಜನವರಿಯಲ್ಲಿ 2,07,551 ಪ್ರವಾಸಿಗರು ಆಗಮಿಸಿದ್ದಾರೆ.
ಜೋಗ ಫಾಲ್ಸ್ಗೆ ನವೆಂಬರ್ನಲ್ಲಿ 4,70,712, ಡಿಸೆಂಬರ್ನಲ್ಲಿ 46,274 ಜನವರಿಯಲ್ಲಿ 5,16,936 ಪ್ರವಾಸಿಗರು ಆಗಮಿಸಿದ್ದಾರೆ. ಕೆಳದಿ ದೇವಾಲಯಕ್ಕೆ ನವೆಂಬರ್ನಲ್ಲಿ 27,568 ಪ್ರವಾಸಿಗರು, ಡಿಸೆಂಬರ್ನಲ್ಲಿ 3,800 ಹಾಗೂ ಜನವರಿಯಲ್ಲಿ 31,368 ಜನ ಪ್ರವಾಸಿಗರು ಆಗಮಿಸಿದ್ದಾರೆ.
ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ: ಸದ್ಯ ಶಿವಮೊಗ್ಗ ಜಿಲ್ಲೆಯ ಪ್ರವಾಸಿತಾಣಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ಆದರೆ, ಲಾಕ್ ಡೌನ್ಕ್ಕಿಂತ ಮುಂಚೆ ಇದ್ದ ಪ್ರವಾಸಿಗರಿಗಿಂತ ಶೇ 30 ಪ್ರವಾಸಿಗರ ಕೊರತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರನ್ನು ಹೆಚ್ಷು ಆಕರ್ಷಿಸುವಂತೆ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ನಿರ್ದೇಶಕ ಪಾಂಡುರಂಗ ಹೇಳಿದರು.
ಹುಲಿ - ಸಿಂಹಧಾಮಕ್ಕೆ ಹಾಲಿ 3 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಾಮಗಾರಿಯೂ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ 4 ಲಕ್ಷ ಜನ ಆಗಮಿಸುವಂತೆ ಮಾಡಲಾಗುವುದು ಎಂದು ಹುಲಿ- ಸಿಂಹಧಾಮದ ಮುಖ್ಯಾಧಿಕಾರಿ ಮುಕುಂದ್ ಚಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಆ್ಯಸಿಡ್ ನಾಗನ ಬಂಧನ.. ಖಾವಿ ಧರಿಸಿ ಧ್ಯಾನ ಮಾಡುತ್ತಿದ್ದಾಗಲೇ ಪೊಲೀಸ್ ಬಲೆಗೆ!