ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಗರದ ವಿವಿಧ ವಾರ್ಡ್ಗಳಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ ನಗರದ ಅಶೋಕ ನಗರದ ಪಾರ್ಕ್ ಮುಂಭಾಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಸಭೆ ನಡೆಸಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ನಿಮ್ಮ ಧ್ವನಿಯಾಗಿ ಸಂಸತ್ನಲ್ಲಿ ನಾನು ಇರುತ್ತೇನೆ. ನಾನು ಕಳೆದ ಉಪಚುನಾವಣೆಯಲ್ಲಿ ಸೋತಿದ್ದೇನೆ. ಈ ಬಾರಿ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ. ನನಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಹೆಸರನ್ನು ಹೇಳಲು ಮಧು ಬಂಗಾರಪ್ಪ ತಡಬಡಾಯಿಸಿದ ಘಟನೆಯೂ ನಡೆಯಿತು. ಕೆಲವರ ಹೆಸರು ಹೇಳಿ ಮತ್ತೆ ಕೆಲವರ ಹೆಸರನ್ನು ಹೇಳಲು ಗೊತ್ತಾಗದೆ ಹೋದಾಗ, ನಾನು ಕೆಲವರ ಹೆಸರನ್ನು ಹೇಳದೆ ಹೋದ್ರೆ ಬೇಜಾರಾಗಬೇಡಿ. ನಿಮ್ಮ ಹೆಸರನ್ನು ಹೇಳಲು ನನಗೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು ಎಂದರು.
ಗರಂ ಆದ ಮಧು...
ಬಂಗಾರಪ್ಪನವರ ಪುತ್ಥಳಿ ಇಟ್ಟುಕೊಂಡು ಬಿಜೆಪಿಯವರು ಮತಯಾಚನೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಮಧು ಬಂಗಾರಪ್ಪ ಗರಂ ಆದರು. ಈ ಕುರಿತ ಪ್ರಶ್ನೆಯನ್ನು ನನಗೆ ಕೇಳಬೇಡಿ. ಬಂಗಾರಪ್ಪನವರ ಪುತ್ಥಳಿ ಇಟ್ಟುಕೊಂಡು ಹೋದ್ರೆ, ಸೊರಬದ ಜನ ಅಷ್ಟು ದಡ್ಡರಲ್ಲ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಧು ಬಂಗಾರಪ್ಪ ಖಾರವಾಗಿ ಉತ್ತರ ನೀಡಿದ್ದಾರೆ. ಅಲ್ಲದೆ ಈ ಕುರಿತು ಮುಂದೆ ನನಗೆ ಪ್ರಶ್ನೆ ಮಾಡಬೇಡಿ ಎಂದು ಮಾಧ್ಯಮದವರಲ್ಲಿ ವಿನಂತಿ ಮಾಡಿಕೊಂಡರು.
ಇನ್ನು ಬಿಜೆಪಿಯವರು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳಿನ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಾನು ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಸುತ್ತಿದ್ದೇನೆ. ಹೋದ ಕಡೆಯಲೆಲ್ಲಾ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಈ ಬಾರಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಮಾರ್ಚ್ 30 ರಂದು ನನ್ನ ಪರ ಪ್ರಚಾರಕ್ಕೆ ಡಿ.ಕೆ.ಶಿವಕುಮಾರ್ ಭದ್ರಾವತಿಗೆ ಆಗಮಿಸಲಿದ್ದಾರೆ ಎಂದರು.