ಶಿವಮೊಗ್ಗ: ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, 10 ಸಾವಿರ ರೂ ನಗದು ಸೇರಿ ಮನೆಯಲ್ಲಿದ್ದ ಪೀಠೋಪಕರಣಗಳೆಲ್ಲ ಹೊತ್ತಿ ಉರಿದ ಘಟನೆ ಜಿಲ್ಲೆಯ ಮಲವಗೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊರ ವಲಯದ ಮಲವಗೊಪ್ಪ ನಿವಾಸಿ ಶರತ್ ನಾಯ್ಕ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಟಿ.ವಿ, ಶೋಕೇಸ್, ಮಂಚ ಸುಟ್ಟು ಕರಕಲಾಗಿದೆ.
ರಾತ್ರಿ ಮನೆಯವರೆಲ್ಲ ಮಲಗಿದ್ದು, ಆಕಸ್ಮಿಕವಾಗಿ ಬೆಂಕಿ ಕಂಡು ಗಾಬರಿಗೊಂಡಿದ್ದರು. ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬೆಂಕಿ ನಂದಿಸಲಾಗಿದೆ ಎಂದು ಗೊತ್ತಾಗಿದೆ.