ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಇವರಿಬ್ಬರು ರಾಜಕೀಯ ನಾಯಕರ ಬಗ್ಗೆ ಹೇಳಿರುವ ಮಾತುಗಳು ಶೋಭೆ ತರುವಂತದ್ದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಟುಕಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೆಹರು ಬಗ್ಗೆ ಸಿ.ಟಿ. ರವಿ ಹೇಳಿಕೆ ಅವರಿಗೂ ಬಿಜೆಪಿಗೂ ಶೋಭೆ ತರುವಂತಹದ್ದಲ್ಲ. ನೆಹರು ಬಗ್ಗೆ ಮಾತನಾಡುವಾಗ ಅವರ ಇತಿಹಾಸ ತಿಳಿದು ಮಾತನಾಡಲಿ ಹಾಗೂ ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಬಗ್ಗೆ ಮಾತನಾಡುವ ಮುನ್ನ ಶಾಸಕ ಪ್ರಿಯಾಂಕ್ ಖರ್ಗೆ, ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಹಾಗೂ ಹೊರಗಡೆ ಹೇಗೆ ಮಾತನಾಡುತ್ತಾರೆ ಎಂಬುವುದನ್ನ ನೋಡಿ ಕಲಿಯಲಿ ಎಂದು ಸಲಹೆ ನೀಡಿದರು.
ಹೆಸರು ಬದಲಾವಣೆ ಆದ್ರೆ ಏನಾಗುತ್ತದೆ: ಇನ್ನೂ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಸರು ಬದಲಾವಣೆ ಮಾಡಿ ಮತ್ತೊಬ್ಬರ ಹೆಸರು ಹಾಕಿದರೆ, ಏನಾಗುತ್ತದೆ. ಇಂತಹ ಸಣ್ಣ ಘಟನೆಗಳು ನಡೆಯಬಾರದು ಎಂದರು.
ಬಿಎಸ್ವೈ ತಂದೆಯಂತೆ ಬೊಮ್ಮಾಯಿಗೆ ಮಾರ್ಗದರ್ಶನ ಮಾಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿ.ಎಸ್.ಯಡಿಯೂರಪ್ಪ ನೀಡುವ ಮಾರ್ಗದರ್ಶನ ತಂದೆ ಮಗನಿಗೆ ನೀಡುವಂತಹ ಮಾರ್ಗದರ್ಶನವಾಗಬೇಕು. ಅತ್ತೆ ಮಾರ್ಗದರ್ಶನವಾಗಬಾರದು. ಹಾಗೇನಾದರೂ ಆದ್ರೆ ಆಡಳಿತ ಕಷ್ಟವಾಗಲಿದೆ ಎಂದು ಹಳ್ಳಿಹಕ್ಕಿ ಎಚ್ಚರಿಸಿದರು.
ಮೈಸೂರಿನವರಿಗೆ ಉಸ್ತುವಾರಿ ಸ್ಥಾನ ನೀಡಿ: ಮೈಸೂರು ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೇಳಿದ್ದೇವೆ. ಬೇರೆ ಜಿಲ್ಲೆಯಿಂದ ಉಸ್ತುವಾರಿ ಸಚಿವರಾದರೆ, ಜಿಲ್ಲೆಯ ಅಭಿವೃದ್ಧಿಗೆ ಕಷ್ಟವಾಗುತ್ತದೆ ಎಂದರು.
ಆತುರ ಬೇಡ: ಶಾಲೆ ಪ್ರಾರಂಭ ಮಾಡುವ ಬಗ್ಗೆ ತಜ್ಞರ ಸಲಹೆಯನ್ನ ತೆಗೆದುಕೊಂಡು ಎಲ್ಲ ಮುಂಜಾಗ್ರತಾ ಕ್ರಮವನ್ನ ವಹಿಸಬೇಕು. ಜೊತೆಗೆ ಶಾಲೆ ಆರಂಭದ ಬಗ್ಗೆ ಆತುರ ಬೇಡ ಎಂದು ಸಲಹೆ ನೀಡಿದರು.