ಮೈಸೂರು : ಎಣ್ಣೆ ಹೊಡೆಯುವಾಗ ಟೇಬಲ್ ಮೇಲೆ ಇಟ್ಟಿದ್ದ ಸಿಗರೇಟ್ ಅನ್ನು ಅನುಮತಿ ಇಲ್ಲದೆ ಸೇದಿದ ವಿಚಾರಕ್ಕೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ವೊಂದರಲ್ಲಿ ಕಿರಣ್ ಎಂಬಾತ, ಆತನ ಚಿಕ್ಕಪ್ಪನ ಮಗ ಪ್ರಮೋದ್ ಹಾಗೂ ಸ್ನೇಹಿತರಾದ ರಾಕೇಶ್ ಹಾಗೂ ಮಹೇಶ್ ಎಂಬುವರ ಜೊತೆ ಸೇರಿ ಎಣ್ಣೆ ಹೊಡೆಯುತ್ತಿದ್ದರು.
ಆ ಸಂದರ್ಭದಲ್ಲಿ ಪ್ರಮೋದ್ ಸಿಗರೇಟ್ ಸೇದಿ ಟೇಬಲ್ ಮೇಲೆ ಇಟ್ಟಿದ್ದ. ಆ ಸಿಗರೇಟ್ನ ಕಿರಣ್ ತೆಗೆದುಕೊಂಡು ಒಂದು ಧಮ್ ಹೊಡೆದಿದ್ದಾನೆ. ಇದರಿಂದ ಸಿಟ್ಟಾದ ಪ್ರಮೋದ್, ಕಿರಣ್ಗೆ ಆವಾಜ್ ಹಾಕಿದ್ದಾನೆ. ಬೇಸರಗೊಂಡ ಕಿರಣ್ ಸಿಗರೇಟ್ನ ಎಸೆದು ಕೋಪ ತೀರಿಸಿಕೊಂಡಿದ್ದಾನೆ.
ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕಂಠ ಪೂರ್ತಿ ಕುಡಿದಿದ್ದ ಪ್ರಮೋದ್ ಬಾರ್ನಲ್ಲೇ ಕಿರಣ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಕಿರಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಿರಣ್ ತನ್ನ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ವಿವಾದಾತ್ಮಕ ಪೋಸ್ಟ್.. ದಾವಣಗೆರೆ ಗಲಾಟೆ ಪ್ರಕರಣದ 10 ಆರೋಪಿಗಳು ಅಂದರ್!
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಕೇಶ್ ಹಾಗೂ ಮಹೇಶ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ತಲೆ ಮರಿಸಿಕೊಂಡಿರುವ ಪ್ರಮುಖ ಆರೋಪಿ ಪ್ರಮೋದ್ಗಾಗಿ ಬಲೆ ಬೀಸಿದ್ದಾರೆ.