ಮೈಸೂರು: ದಸರಾ ಮಹೋತ್ಸವ -2019ರ ಅಂಗವಾಗಿ ಆಗಸ್ಟ್ 22ರ ಬೆಳಿಗ್ಗೆ 11 ಗಂಟೆಗೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜ ಪಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ತಿಳಿಸಿದ್ದಾರೆ.
![Gajapayana event](https://etvbharatimages.akamaized.net/etvbharat/prod-images/kn-mys-02-gajapayana-file-photo-vis-ka10003_21082019100700_2108f_1566362220_181.jpg)
ದಸರಾ ಮಹೋತ್ಸವದಲ್ಲಿ ನಾಗರಹೊಳೆ ಹುಲಿ ಯೋಜನೆ ವಿಭಾಗದ ಬಳ್ಳೆ ಆನೆ ಶಿಬಿರದ 59 ವರ್ಷದ ಅರ್ಜುನ, ಮತ್ತಿಗೋಡು ಆನೆ ಶಿಬಿರದ 61 ವರ್ಷದ ಬಲರಾಮ, 53 ವರ್ಷದ ಅಭಿಮನ್ಯು, 63 ವರ್ಷದ ವರಲಕ್ಷ್ಮೀ, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ 41 ವರ್ಷದ ಕಾವೇರಿ, 62 ವರ್ಷದ ವಿಜಯ, 46 ವರ್ಷದ ವಿಕ್ರಮ, 37 ವರ್ಷದ ಗೋಪಿ, 36 ವರ್ಷದ ಧನಂಜಯ, 49 ವರ್ಷದ ಈಶ್ವರ, ಬಿ.ಆರ್.ಟಿ ವಿಭಾಗದ ಕೆ.ಗುಡಿ ಆನೆ ಶಿಬಿರದ 52 ವರ್ಷದ ದುರ್ಗಾ ಪರಮೇಶ್ವರಿ, ಬಂಡೀಪುರ ವಿಭಾಗ ರಾಮ್ಪುರ ಆನೆ ಶಿಬಿರದ 57 ವರ್ಷದ ಜಯಪ್ರಕಾಶ್ ಆನೆಗಳು ಪಾಲ್ಗೊಳಲಿವೆ.
ಆಗಸ್ಟ್ 22ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮದಲ್ಲಿ ಅರ್ಜುನ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಪಾಲ್ಗೊಳ್ಳಲಿದ್ದು, ಹೆಚ್ಚುವರಿಯಾಗಿ ಬಂಡೀಪುರ ವಿಭಾಗದ ರಾಮ್ಪುರ ಆನೆ ಶಿಬಿರದ 17 ವರ್ಷದ ಲಕ್ಷ್ಮೀ ಹಾಗೂ 19 ವರ್ಷದ ರೋಹಿತ್ ಒಟ್ಟು 14 ಆನೆಗಳು ಪಾಲ್ಗೊಳ್ಳಲಿವೆ ಎಂದು ಅಲೆಕ್ಸಾಂಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.