ಮೈಸೂರು: ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ (Repeal of 3 farm laws) ಪಡೆದಿದ್ದು, ಇದು ಜನಾಂದೋಲನಕ್ಕೆ ಸಿಕ್ಕ ಜಯ ಎಂದು ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎಲ್ಲ ಜನರು ಒಗ್ಗಾಟ್ಟಾಗಿ, ಒಂದಾಗಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಿದ್ದು, ಜಾತಿ, ಭಾಷೆ, ಧರ್ಮ ಹಾಗೂ ಗಡಿ ಮೀರಿದ್ದಾಗಿದೆ. 541 ಸಂಘಟನೆಗಳು ರೈತ, ಕಾರ್ಮಿಕ, ದಲಿತರು ಸೇರಿದಂತೆ ಎಲ್ಲ ಪ್ರಗತಿಪರ ಸಂಘಟನೆಗಳು ಸೇರಿ ಒಂದು ದೊಡ್ಡ ಹೋರಾಟವನ್ನು ನಡೆಸಿದ್ದೆವು.
ಈ ಹೋರಾಟಕ್ಕೆ ಪ್ರಪಂಚದ ನಾನಾ ರಾಷ್ಟ್ರಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೊನೆಗೂ ಮೊಂಡಾಟವನ್ನು ಬಿಟ್ಟು, ರೈತ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಇದು ಜನಾಂದೋಲನಕ್ಕೆ ದೊರೆತ ಮೊದಲ ಜಯ. ಇದರಿಂದ ಪ್ರಪಂಚದಲ್ಲಿ ಚಳವಳಿಗಳಿಗೆ ಎಂದಿಗೂ ಜಯ ಇದೆ ಎಂಬುದು ಸಾಬೀತಾಗಿದೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
ರಾಜಕೀಯದ ಅನುಮಾನ: ಆದರೆ,ಇದರ ಹಿಂದೆ ರಾಜಕೀಯ ಉದ್ದೇಶವು ಇರುವಂತೆ ಕಾಣುತ್ತಿದೆ. ಮುಂದೆ ಉತ್ತರ ಪ್ರದೇಶ ಹಾಗೂ ನಾಲ್ಕೈದು ರಾಜ್ಯಗಳ ಚುನಾವಣೆ ಇದೆ. ಹಿಂದೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಕೆಲವು ಕಡೆ ಸೋಲಾಗಿದೆ. ಚುನಾವಣೆ ಸೋಲನ್ನು ತಪ್ಪಿಸಿಕೊಳ್ಳಲು ಇದು ರಾಜಕೀಯ ತಂತ್ರವಾಗಿ ಬಳಸಿರಬಹುದು ಎಂದು ಹೇಳುತ್ತೇವೆ. ಆದರೆ ಈ ಸರ್ಕಾರದ ಬಗ್ಗೆ ಅನುಮಾನ ಇರಲಿದ್ದು, ಈಗ ಚಳವಳಿಯಲ್ಲಿ ಜಯ ಪಡೆದಿದ್ದೇವೆ ಎಂದರು.
ಹೋರಾಟ ಮುಂದುವರಿಯುತ್ತದೆ: ಕಾನೂನಾತ್ಮಕವಾಗಿ ಎಂಎಸ್ಪಿ ಮಾಡಿ ಎಂದು ಬೇಡಿಕೆ ಇಟ್ಟಿದ್ದೆವು. ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಲ್ಲ. ಹಾಗಾಗಿ ನಮಗೆ ಸಂಪೂರ್ಣ ತೃಪ್ತಿಯಾಗಿಲ್ಲ. ಎಂಎಸ್ಪಿ ಗ್ಯಾರಂಟಿ ಆಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ಆದರೆ, ಹೋರಾಟದ ದಿಕ್ಕು ಯಾವ ರೀತಿ ಇರುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದವರು ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.