ಮಂಗಳೂರು: ಕೊರೊನಾ ಸೋಂಕು ತಡೆಯಲು ಸರ್ಕಾರ ಕರ್ಫ್ಯೂ ಘೋಷಣೆ ಮಾಡುವುದು ಬಹಳ ಸುಲಭ. ಆದರೆ ಜನತೆಯ ದಿನನಿತ್ಯದ ಬದುಕು ಯಾವುದೇ ರೀತಿಯಲ್ಲಿ ಹಳಿ ತಪ್ಪದಂತೆ ನಿಗಾವಹಿಸುವುದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲಸವಿಲ್ಲದ ಕಾರಣ ಜನತೆಗೆ ಆರ್ಥಿಕ ಸಮಸ್ಯೆಯಾಗಬಹುದು. ಆದ್ದರಿಂದ ದಿನನಿತ್ಯದ ಬದುಕು ನಿರ್ವಹಿಸಲು ಸಾಮಾನ್ಯ ಮಟ್ಟದ ಕಿಟ್ ಒದಗಿಸುವ ಕಾರ್ಯ ಸರ್ಕಾರದಿಂದ ಆಗಬೇಕು. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ, ಇದನ್ನು ಕೊಡಲು ಸಾಧ್ಯ ಎಂದು ಹೇಳಿದರು.
ಅದೇ ರೀತಿ ದಿನಗೂಲಿ ನೌಕರರಿಗೆ ಸೌಲಭ್ಯ ನೀಡುವುದು, ವಲಸೆ ಕಾರ್ಮಿಕರು ಜಿಲ್ಲೆಯನ್ನು ತೊರೆಯದಂತೆ ವ್ಯವಸ್ಥೆ ಮಾಡಬೇಕು. ಆದ್ದರಿಂದ ಪ್ರತೀ ಗ್ರಾ.ಪಂ.ನಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ಅವರ ನಿತ್ಯದ ಬದುಕಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಅದಕ್ಕಾಗಿ ದೂರಾಲೋಚನೆ ಅಗತ್ಯ. ಜಿಲ್ಲಾಡಳಿತ ಪ್ರತೀ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಎನ್ ಜಿಒಗಳು ಮಾಡುವ ಕಾರ್ಯಗಳ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಜನರಿಗೆ ಹೊರೆಯಾಗದಂತೆ ಕೊರೊನಾ ಕರ್ಫ್ಯೂ ಸಮಯದಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್ ಮನ್ನಾ ಮಾಡುವ ಕಾರ್ಯ ಆಗಬೇಕು. ಕೆಲವೊಂದು ರಾಜ್ಯಗಳಲ್ಲಿ ಬಿಲ್ ಮನ್ನಾ ಮಾಡಲಾಗಿದ್ದು, ರಾಜ್ಯದಲ್ಲಿಯೂ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ರಮಾನಾಥ ರೈ ಸಲಹೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ತಡೆಗಟ್ಟುವಲ್ಲಿ ವಿಫಲವಾಗಿದೆ. ಇಂದು ಎರಡನೇ ಅಲೆಯ ಕೋವಿಡ್ ಇಷ್ಟೊಂದು ಮಟ್ಟಕ್ಕೆ ಉಲ್ಬಣಗೊಳ್ಳಲು ಸರ್ಕಾರವೇ ಕಾರಣ. ಕೋವಿಡ್ ನಿಯಂತ್ರಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ತಾರತಮ್ಯವಿದೆ. ಮಹಾರಾಷ್ಟ್ರದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಆದರೆ ಅಲ್ಲಿಗೆ ಆಮ್ಲಜನಕದ ಸರಬರಾಜು ಕಡಿಮೆ ಮಾಡಲಾಗಿದೆ. ಕರ್ನಾಟಕದಲ್ಲಿ ಈವರೆಗೆ ಆಮ್ಲಜನಕದ ಘಟಕ ಸ್ಥಾಪನೆಯಾಗಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ರೈ ಒತ್ತಾಯಿಸಿದರು.
ಪಿಎಂ ಕೇರ್ ನಲ್ಲಿ ಕೋಟ್ಯಂತರ ರೂ. ಸಾರ್ವಜನಿಕರ ಹಣ ಸಂಗ್ರಹವಾಗಿದ್ದು, ಆ ಹಣ ಯಾವ ರೀತಿ ವಿನಿಯೋಗವಾಗಿದೆ ಎಂಬುದರ ಬಗ್ಗೆ ಹಾಗೂ ಕಳೆದ ಬಾರಿ ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಬಿಡುಗಡೆ ಮಾಡಿರುವ 20 ಸಾವಿರ ಕೋಟಿ ರೂ. ಹಣವು ಯಾವ ರೀತಿ ಖರ್ಚಾಗಿದೆ ಎಂಬುದರ ಕುರಿತಂತೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ. ರಾಜ್ಯ ಸರ್ಕಾರದಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ ಎಂದರು.
ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೋವಿಡ್ ನಿಯಂತ್ರಣ ಮಾಡಲು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಗೂಗಲ್ ಮೀಟಿಂಗ್ ನಲ್ಲಿ 3 ಗಂಟೆಗಳ ಕಾಲ ಸಭೆ ನಡೆಸಿ ಅನೇಕ ನಿರ್ದೇಶನಗಳನ್ನು ಮಾಡಿದ್ದಾರೆ. ಅದನ್ನು ಬೂತ್ ಮಟ್ಟದವೆರೆಗೆ ತಲುಪಿಸುವ ಜವಾಬ್ದಾರಿಯಿದೆ. ಅಲ್ಲದೆ ಇದೀಗ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಕಚೇರಿಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಲಾಗಿದೆ. ಜಿಲ್ಲಾಡಳಿತ ಕಾಂಗ್ರೆಸ್ ನ ಸಲಹೆ ಸೂಚನೆಗಳನ್ನು ಪರಿಗಣಿಸಬೇಕು. ಕಾಂಗ್ರೆಸ್ ಸಹಕಾರ ನೀಡಲು ಬದ್ಧ ಎಂದು ಇದೇ ಸಂದರ್ಭದಲ್ಲಿ ರಮಾನಾಥ ರೈ ಹೇಳಿದರು.