ಮಂಗಳೂರು: ಮಂಗಳೂರಿನಿಂದ ನವದೆಹಲಿಗೆ ಕೆಲವು ತಿಂಗಳಿಂದ ನಿಂತಿದ್ದ ನೇರ ವಿಮಾನಯಾನ ಮತ್ತೆ ಆರಂಭವಾಗಲಿದೆ. ಸ್ಪೈಸ್ ಜೆಟ್ ಸಂಸ್ಥೆ ಆ. 4 ರಿಂದ ಇಲ್ಲಿಂದ ನವದೆಹಲಿಗೆ ವಿಮಾನ ಹಾರಾಟ ನಡೆಸಲಿದೆ ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಈ ಮೂಲಕ ವಿಮಾನ ಸಂಚಾರ ಪ್ರಯಾಣಿಕರಿಗೆ ಸಿಹಿ ಸುದ್ದಿಕೊಟ್ಟಿದೆ.
ಈ ಹಿಂದೆ ಜೆಟ್ಏರ್ ವೇಸ್ನಿಂದ ಮಂಗಳೂರು ಮತ್ತು ನವದೆಹಲಿ ನಡುವಿನ ವಿಮಾನ ಸಂಪರ್ಕ ಸೇವೆ ಸ್ಥಗಿತಗೊಂಡಿತ್ತು. ಆ. 4 ರಿಂದ ಆರಂಭವಾಗಲಿರುವ ಸ್ಪೈಸ್ ಜೆಟ್ ವಿಮಾನ ಮಂಗಳೂರಿನಿಂದ ಬೆಳಗ್ಗೆ 6.15 ಕ್ಕೆ ಹೊರಡಲಿದ್ದು 8.55ಕ್ಕೆ ನವದೆಹಲಿಗೆ ತಲುಪಲಿದೆ. ಅದೇ ರೀತಿ ರಾತ್ರಿ 8.30ಕ್ಕೆ ನವದೆಹಲಿಯಿಂದ ಹೊರಡುವ ವಿಮಾನ ರಾತ್ರಿ 11.15ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರು ಮತ್ತು ನವದೆಹಲಿ ನಡುವೆ ನೇರ ವಿಮಾನ ಇಲ್ಲದ ಪರಿಣಾಮ ವಿಮಾನ ಸಂಚಾರ ಪ್ರಯಾಣಿಕರು ಬೆಂಗಳೂರು ಅಥವಾ ಮುಂಬೈ ವಿಮಾನ ನಿಲ್ದಾಣದಿಂದ ತೆರಳಬೇಕಿತ್ತು. ಇದೀಗ ಹೊಸ ಸೇವೆ ನೇರ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.