ಮಂಗಳೂರು: ಸ್ಯಾಕ್ಸೋಫೋನ್ಗೆ ಮತ್ತೊಂದು ಹೆಸರೇ ಕದ್ರಿ ಗೋಪಾಲನಾಥ್. ಅವರು ಓರ್ವ ಮಹಾನ್ ಸಾಧಕ. ಕದ್ರಿಯವರದ್ದು ಗಾಯಕಿ ಶೈಲಿಯ ವಾದನ ಎಂದು ಖ್ಯಾತ ಕ್ಲಾರಿಯೋನೆಟ್ ವಾದಕ ನರಸಿಂಹ ವಡವಾಟಿ ಹೇಳಿದರು.
ಮೂವತ್ತು ವರ್ಷಗಳಿಂದ ನಾವಿಬ್ಬರು ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೊಸ ಪ್ರಯೋಗವನ್ನೇ ಮಾಡಿದ್ದೆವು. ಈ ಪ್ರಯೋಗಗಳಿಗೆ ದೇಶ ವಿದೇಶಗಳಲ್ಲಿ ಪ್ರಚಾರ ದೊರಕಿತು. ಸ್ಯಾಕ್ಸೋಫೋನ್ ಹಾಗೂ ಕ್ಲ್ಯಾರೆನೆಟ್ ಎರಡೂ ವಿಭಿನ್ನ ವಿದೇಶಿ ವಾದ್ಯಗಳು. ಅಲ್ಲದೆ ಬೇರೆ ಬೇರೆ ಪ್ರಕಾರದ ಸಂಗೀತ ಎಂದು ಹೇಳಿದರು.
ಇಬ್ಬರೂ ಸೇರಿ 400ಕ್ಕೂ ಅಧಿಕ ಕಛೇರಿಗಳಲ್ಲಿ ಜುಗುಲ್ಬಂದಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ. ನಮ್ಮಿಬ್ಬರ ಜುಗಲ್ಬಂದಿ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು. ಅಲ್ಲದೆ ಸ್ಯಾಕ್ಸೋಫೋನ್ ಹಾಗೂ ಕ್ಲ್ಯಾರೆನೆಟ್ ಕರ್ಕಶ ವಾದ್ಯಗಳು. ಈ ಎರಡೂ ವಾದ್ಯಗಳಲ್ಲಿಯೂ ಸುಸ್ವರವಾಗಿ ನಾದ ಹೊಮ್ಮಬೇಕೆಂದು ಪಳಗಿಸಿಕೊಂಡವರು ಎಂದು ತಮ್ಮ ಒಡನಾಟದ ಹಳೆಯ ನೆನಪುಗಳನ್ನು ಹೀಗೆ ಮೆಲುಕು ಹಾಕಿದರು.
ಕದ್ರಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರು. ನಾನು ಹಿಂದೂಸ್ತಾನಿ ಗಾಯನ ಅಭ್ಯಾಸ ಮಾಡಿದವನು. ಎರಡೂ ಗಾಯಕಿ ಶೈಲಿಯನ್ನು ವಾದ್ಯಗಳ ಮೂಲಕ ನುಡಿಸಲು ಪ್ರಯತ್ನ ಪಟ್ಟಿದ್ದೇವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡೂ ವಾದ್ಯಗಳ ಮೂಲಕ ಭಾರತೀಯ ಸಂಗೀತವನ್ನು ಪ್ರಚಾರ ಮಾಡಬೇಕೆಂಬ ಮುಖ್ಯ ಉದ್ದೇಶ ಇಟ್ಟುಕೊಂಡಿದ್ದೆವು. ಆದರೆ, ಇಂದು ನಾವು ಸ್ಯಾಕ್ಸೋಫೋನ್ ನಿಧಿಯನ್ನೇ ಕಳೆದುಕೊಂಡಿದ್ದೇವೆ ಎಂದು ದುಃಖತಪ್ತರಾದರು.