ಮಂಗಳೂರು(ದಕ್ಷಿಣ ಕನ್ನಡ) : ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಬಗ್ಗೆ ಕೇರಳದವರ ಕೈವಾಡದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಆತ ಸಜ್ಜನ ಕಾರ್ಯಕರ್ತ. ತನ್ನ ವಿಚಾರದಲ್ಲಿ, ಜೀವನದಲ್ಲಿ ರಾಷ್ಟ್ರಮಾತೆಯ ಆರಾಧನೆಯೆ ಪ್ರಮುಖ ಎಂದು ತಿಳಿದುಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಒಡನಾಡಿ, ಸಹೋದರನನ್ನು ಕಳೆದುಕೊಂಡಿದ್ದೇವೆ. ಅವರ ಮನೆಯವರಿಗೆ ಎಷ್ಟು ದುಃಖವಿದೆಯೋ ಅಷ್ಟೇ ದುಃಖ ನಮಗಿದೆ ಎಂದರು.
ಈ ಘಟನೆ ನಡೆದ ಹಿನ್ನೆಲೆ ಕಂಡಾಗ ದೇಶದಲ್ಲಿ ಮತೀಯ ಶಕ್ತಿಗಳು ಇಂತಹ ಕೃತ್ಯ ಮಾಡಿ ಭಯದ ವಾತವರಣ ನಿರ್ಮಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ, ಡಿಜೆ ಹಳ್ಳಿ ಕೆಜೆ ಹಳ್ಳಿ ಘಟನೆ, ಹುಬ್ಬಳ್ಳಿ ಘಟನೆ ಹೀಗೆ ಮತಾಂಧ ಶಕ್ತಿಗಳು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದೆ. ಯಾವ್ಯಾವ ಶಕ್ತಿಯಿದೆ ಇದೆಲ್ಲವನ್ನೂ ತನಿಖೆ ಮಾಡಬೇಕು. ಪ್ರವೀಣ್ ನೆಟ್ಟಾರ್ ಹತ್ಯೆ ಗಂಭೀರವಾಗಿ ತೆಗೆದುಕೊಂಡು ಉತ್ತರ ಕೊಡುವ ಪ್ರಯತ್ನ ಆಗುತ್ತದೆ ಎಂದರು.
ಈ ಹತ್ಯೆಗೆ ಸೂಕ್ತವಾದ ಉತ್ತರ ಕೊಡುತ್ತೇವೆ. ನಾವು ಯಾವತ್ತೂ ಕಾರ್ಯಕರ್ತರ ಪರ ಇದ್ದೇವೆ. ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಸಂಪೂರ್ಣ ತನಿಖೆ ಮತ್ತು ತಕ್ಕ ಉತ್ತರ ಕೊಡಲು ಸರಕಾರ ಬದ್ಧ ಇದೆ. ನಮ್ಮಲ್ಲಿರುವ ಭಾವನೆಗಳು ಅವರಲ್ಲಿ ಇದೆ. ಇದಕ್ಕೆ ಸೂಕ್ತ ಉತ್ತರ ಕೊಡಬೇಕು ಎಂದು ಜನರ ಆಕ್ರೋಶ ಇದೆ. ಈ ರೀತಿಯ ಘಟನೆ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತದೆ. ಹೀಗಾಗಿ ಈ ವಿಚಾರವಾಗಿ ಸೂಕ್ತ ಕ್ರಮ ಸರ್ಕಾರ ಕೈಗೊಳ್ಳಲಿದೆ ಎಂದರು.
ವಿಶ್ವಾಸ ತುಂಬುವ ಕೆಲಸ ಮಾಡುತ್ತೇವೆ : ಬಿಜೆಪಿ ಯುವ ನಾಯಕರು ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ವಿವಿಧ ಜಿಲ್ಲೆಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಪ್ರತಿಕ್ರೀಯಿಸಿದ ಅವರು, ಆಕ್ರೋಶದಲ್ಲಿ ಈ ರೀತಿ ಪ್ರತಿಕ್ರೀಯೆ ಸಹಜ. ಎಲ್ಲರನ್ನೂ ಕರೆದು ಮಾತಾಡಿ ವಿಶ್ವಾಸ ತುಂಬುವ ಕೆಲಸ ಮಾಡುತ್ತೇವೆ. ಈ ಹತ್ಯೆಗೆ ನ್ಯಾಯ ಕೊಡಿಸುವ ಕೆಲಸ ಸರಕಾರ ಮಾಡುತ್ತದೆ. ಇದರಲ್ಲಿ ರಾಜಕಾರಣ ಮಾಡುವುದಿಲ್ಲ. ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ : ಪ್ರವೀಣ್ ಹತ್ಯೆ: ಬೆಳಗಾವಿಯಲ್ಲೂ ಬಿಜೆಪಿ ಮುಖಂಡರಿಂದ ರಾಜೀನಾಮೆ