ಮಂಗಳೂರು : ಎಂಆರ್ಪಿಎಲ್ ಕೋಕ್ ಸಲ್ಫರ್ ಘಟಕದಿಂದ ಆಗುತ್ತಿರುವ ಮಾಲಿನ್ಯ ತಡೆಗಟ್ಟಲು ಕಂಪನಿ ಹಾಗೂ ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ. ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ಏಳು ವರ್ಷಗಳಿಂದ ಸತತ ಹೋರಾಟ ನಡೆಸುತ್ತಿದ್ದರೂ ಮಾಲಿನ್ಯ ಪರಿಹಾರಕ್ಕಾಗಿ ಸರ್ಕಾರ ಹೊರಡಿಸಿದ ಆರು ಅಂಶದ ಪರಿಹಾರ ಕ್ರಮಗಳು ಜಾರಿಯಾಗುತ್ತಿಲ್ಲ. ಅಲ್ಲದೆ ಉದ್ಯೋಗಗಳು ಹೊರ ರಾಜ್ಯದವರಿಗೆ, ಕೆಮಿಕಲ್ ಮಾಲಿನ್ಯದಿಂದ ರೋಗ ರುಜಿನಗಳು ಮಾತ್ರ ಸ್ಥಳೀಯರಿಗೆ ಎಂಬಂತಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಇಝಡ್ ಕಾರಿಡಾರ್ ರಸ್ತೆಯಲ್ಲಿರುವ ಎಂಆರ್ಪಿಎಲ್ ದ್ವಾರದ ಮುಂಭಾಗ ನಾಗರಿಕ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಅವರು, ಜನವಸತಿ, ಕಂಪನಿ ನಡುವೆ ನಿರ್ಮಾಣವಾಗಬೇಕಿದ್ದ 27 ಎಕರೆ ಹಸಿರು ವಲಯದ ಆದೇಶ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ.
ಜಿಲ್ಲಾಡಳಿತವೂ ಕಂಪನಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಈಗ 220 ಉದ್ಯೋಗಗಳಿಗೆ ಎಂಆರ್ಪಿಎಲ್ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು ಸ್ಥಳೀಯರಿಗೆ ಸಣ್ಣ ಆದ್ಯತೆಯನ್ನೂ ನೀಡುತ್ತಿಲ್ಲ ಎಂದರು.
ಕೋಕ್ ಸಲ್ಫರ್ ಮಾಲಿನ್ಯದಿಂದ ಸುತ್ತಮುತ್ತ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಆರೋಗ್ಯದ ಸ್ಥಿತಿಗತಿಯ ಅಧ್ಯಯನಕ್ಕೆ ಸಮಿತಿಯೊಂದನ್ನು ನೇಮಿಸುವ ಅಗತ್ಯವಿದೆ. ಹಸಿರು ವಲಯ ನಿರ್ಮಾಣದ ಆದೇಶ ಆದಷ್ಟು ಶೀಘ್ರ ಜಾರಿಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.