ಮಂಗಳೂರು: ನಗರದ ಮಂಗಳಾದೇವಿ ಸಮೀಪದ ಗುಜ್ಜರೆಕೆರೆಯ ಗೋರಕ್ಷಕ ದಂಡು ಹಾಗೂ ಅರೆಕೆರೆ ಬೈಲು ಎಂಬ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಡೆಂಗ್ಯು ಜ್ವರದಿಂದ ಬಳಲುತ್ತಿದ್ದು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಇಂದು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಬಂದ ಶಾಸಕರು, ಡೆಂಗ್ಯು ಜ್ವರ ಪೀಡಿತರಿಗೆ ಹಾಗೂ ಅವರ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಆ ಪರಿಸರವನ್ನು ವೀಕ್ಷಿಸಿ ಅವ್ಯವಸ್ಥೆ ಇರುವ ಚರಂಡಿ ಕಾಮಗಾರಿಗಳನ್ನು ಆದಷ್ಟು ಬೇಗ ಸರಿಪಡಿಸಲು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋರಕ್ಷಕ ದಂಡು ಹಾಗೂ ಅರೆಕೆರೆ ಬೈಲು ಪ್ರದೇಶಗಳಲ್ಲಿ ಡೆಂಗ್ಯು ಜ್ವರ ವಿಪರೀತವಾಗಿ ಬಾಧಿಸಿದ್ದು, ಈಗಾಗಲೇ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯು ಪ್ರತಿಯೊಂದು ಮನೆಯ ಮುಂದೆ ಮಳೆಯ ಸಂದರ್ಭ ನಿಂತಿರುವ ನೀರು ಹಾಗೂ ಅವೈಜ್ಞಾನಿಕವಾಗಿ ಶೇಖರಣೆಯಾಗಿರುವ ನೀರನ್ನು ತೆರವುಗೊಳಿಸುವ ಕಾರ್ಯ ನಡೆಸಿದೆ. ಈ ಪರಿಸರದಲ್ಲಿ ಸರಿ ಸುಮಾರು 49 ಮಂದಿಗೆ ಡೆಂಗ್ಯು ಬಂದಿದೆ. ಅದರಲ್ಲಿ ಸುಮಾರು 11 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಉಳಿದವರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ರೋಗದ ಪರಿಸ್ಥಿತಿ ಮತ್ತೆ ಉಲ್ಬಣವಾಗದಂತೆ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಫಾಗಿಂಗ್ ಮಾಡಲಾಗಿದೆ. ಆದರೆ ಈ ಪರಿಸರದಲ್ಲಿ ಡೆಂಗ್ಯು ಬಂದಿರುವುದರಿಂದ ಮನೆಯ ಒಳಗೂ ಫಾಗಿಂಗ್ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಈ ರೀತಿಯಲ್ಲಿ ಡೆಂಗ್ಯು ನಿಯಂತ್ರಣ ಕಾರ್ಯ ಮಾಡಲಾಗುತ್ತಿದೆ. ಮಾಹಿತಿಯ ಕೊರತೆಯಿಂದ ಕೆಲವು ಮನೆಗಳಲ್ಲಿ ಅವೈಜ್ಞಾನಿಕವಾಗಿ ನೀರು ಶೇಖರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನೆಲ್ಲಾ ತೆರವು ಮಾಡಿಸಲಾಗಿದೆ. ಅಲ್ಲದೆ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ದೊರಕಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎರಡು ಮೂರು ದಿನಗಳಲ್ಲಿ ಇಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯವನ್ನು ಅಧಿಕಾರಿ ವರ್ಗ ಮಾಡಲಿದೆ ಎಂದು ವೇದವ್ಯಾಸ ಕಾಮತ್ ಭರವಸೆ ನೀಡಿದರು.
ಇಲ್ಲಿರುವ ಮನೆಯವರಿಗೆ ವಿಶೇಷವಾಗಿ ನಾನೊಂದು ಮನವಿ ಮಾಡುವುದೇನೆಂದರೆ, ಮನೆಯ ವಠಾರಗಳಲ್ಲಿ ನೀರು ನಿಂತಿರುತಹ ಪರಿಸ್ಥಿತಿ ಏನಾದರೂ ಇದ್ದರೆ ಅದನ್ನು ಆದಷ್ಟು ಬೇಗ ತೆರವುಗೊಳಿಸಬೇಕು. ಸೀಯಾಳ, ಬಾಟ್ಲಿಗಳು, ಬಕೆಟ್ಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಬೇಕು. ನೀರು ಶೇಖರಣೆ ಮಾಡುವ ಸಂದರ್ಭ ಅದನ್ನು ಮುಚ್ಚಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು
.