ಮಂಗಳೂರು: ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆಯಾಗಿದೆ. ಅವರ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಸೀರಿಯಲ್ ರೀತಿಯಂತಾಗಿದೆ. ಜನರ ದಾರಿ ತಪ್ಪಿಸಲು ಮಹಾರಾಷ್ಟ್ರ ಸಿಎಂ ಬೆಳಗಾವಿ, ಕಾರವಾರ, ನಿಪ್ಪಾಣಿಯೆಲ್ಲಾ ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಇದೊಂದು ಉದ್ಧಟತನದ ಹೇಳಿಕೆ. ಕನ್ನಡಿಗನಾಗಿ ನಾನು ಮಹಾರಾಷ್ಟ್ರ ಸಿಎಂಗೆ ಸ್ಪಷ್ಟವಾಗಿ ಹೇಳುವುದೇನೆಂದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದನ್ನು ಎರಡನೇ ರಾಜಧಾನಿಯೆಂದು ಈಗಾಗಲೇ ನಾವು ಘೋಷಣೆ ಮಾಡಿದ್ದೇವೆ. ಅಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸುತ್ತಿರುವುದು ಅವರಿಗೆ ತಿಳಿದೇ ಇದೆ. ಆ ಮೂರೂ ಪಕ್ಷಗಳ ಹೊಂದಾಣಿಕೆ ತಪ್ಪಿ ಹೋಗಿರುವುದರಿಂದ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮುಂಬೈ ಕರ್ನಾಟಕಕ್ಕೆ ಸೇರಿದ್ದು
ಮುಂಬೈ ಕರ್ನಾಟಕಕ್ಕೆ ಸೇರಿದ್ದು ಎಂಬ ತಮ್ಮ ಹೇಳಿಕೆಗೆ ರಾವತ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ, ರಾವತ್ ಅವರು ಬೆಳಗಾವಿ, ಕಾರವಾರ, ನಿಪ್ಪಾಣಿಯಲ್ಲಿ ಹೆಚ್ಚು ಮರಾಠಿ ಮಾತನಾಡುವ ಜನರಿದ್ದಾರೆ. ಹಾಗಾಗಿ ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿದ್ದಾರೆ. ನಾನು ಮುಂಬೈನಲ್ಲಿಯೂ ಬಹಳಷ್ಟು ಮಂದಿ ಕನ್ನಡ ಮಾತನಾಡುವವರಿದ್ದಾರೆ. ಆದ್ದರಿಂದ ಭಾಷೆಯ ಮೇಲೆಯೇ ವಿಭಾಗ ಮಾಡುವುದಾದರೆ ಮುಂಬೈನಲ್ಲಿ ಕನ್ನಡಿಗರು ಜಾಸ್ತಿ ಇದ್ದಾರೆ. ಅದಕ್ಕೆ ಅದನ್ನು ಕರ್ನಾಟಕಕ್ಕೆ ಬಿಟ್ಟುಕೊಡಿ ಎಂದು ಹೇಳಿದ್ದೆ ಎಂದರು.
ನಿಗಮ ಮತ್ತು ಸರ್ಕಾರದಿಂದ ವೇತನ ಪಾವತಿಸಲಾಗಿದೆ
ಕೊರೊನಾ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಸಾರಿಗೆ ಇಲಾಖೆ ಸಂಪೂರ್ಣ ಸ್ತಬ್ಧವಾಗಿತ್ತು. ಆಗ ಸುಮಾರು 650 ಕೋಟಿ ರೂ. ಸರ್ಕಾರದಿಂದ ಪಡೆದುಕೊಂಡು ಎರಡು ತಿಂಗಳ ಸಂಬಳವನ್ನು ಸಾರಿಗೆ ಇಲಾಖೆಯ ಸಿಬ್ಬಂದಿಗೆ ನೂರು ಪ್ರತಿಶತ ನೀಡಲಾಗಿದೆ. ಸಾರಿಗೆ ಇಲಾಖೆ ಆರಂಭವಾದ ಬಳಿಕ ಹಂತ ಹಂತವಾಗಿ ಜನರು ಬಸ್ ಸಂಚಾರ ಆರಂಭಿಸಿದರು. ಆದರೆ ಇಂಧನಕ್ಕೆ ಮತ್ತು ಸಂಬಳ ಕೊಡಲು ಹಣ ಸಾಕಾಗದ ಸಂದರ್ಭದಲ್ಲಿ ಸುಮಾರು ಏಳು ತಿಂಗಳ ಸಂಬಳವನ್ನು 75% ಸರ್ಕಾರದಿಂದ ಹಾಗೂ 25% ನಿಗಮದಿಂದ ಭರಿಸಿ ನವೆಂಬರ್ವರೆಗೆ ಸಂಪೂರ್ಣ ಸಂಬಳ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಇನ್ನೂ ಅರ್ಧ ಸಂಬಳ ನೀಡುವ ವ್ಯವಸ್ಥೆ ಮಾಡಲಾಗುತ್ತದೆ
ಹಣಕಾಸಿನ ಸಮಸ್ಯೆ ಇರುವುದರಿಂದ ಡಿಸೆಂಬರ್ ತಿಂಗಳಲ್ಲಿ ಅರ್ಧ ತಿಂಗಳ ಸಂಬಳ ನೀಡಿದ್ದು, ಇನ್ನು ಮೂರ್ನಾಲ್ಕು ದಿನಗಳೊಳಗೆ ಇನ್ನರ್ಧ ಸಂಬಳ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಜನವರಿ ತಿಂಗಳ ಸಂಬಳವನ್ನೂ ನೀಡಲಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆಯ ಸಿಬ್ಬಂದಿ ಯಾವುದೇ ಕಾರಣಕ್ಕೆ ಆತಂಕಕ್ಕೊಳಗಾಗಬಾರದು ಎಂದು ಲಕ್ಷ್ಮಣ ಸವದಿ ಸಾರಿಗೆ ಇಲಾಖೆಯ ಸಿಬ್ಬಂದಿಗೆ ಮನವರಿಕೆ ಮಾಡಿದರು.
ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಕ್ರಮ
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ಇಲಾಖೆ ಸಂಚಾರ ಸ್ಥಗಿತಗೊಳಿಸಿರುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಸಾರಿಗೆ ಇಲಾಖೆ ಸಿಬ್ಬಂದಿ ಪ್ರತಿಭಟನೆ ನಡೆಸಿ ನಾಲ್ಕು ದಿನಗಳ ಕಾಲ ಸಾರಿಗೆ ಸಂಚಾರ ಸ್ಥಗಿತಗೊಳಿಸಿರುವ ಸಂದರ್ಭದಲ್ಲಿ ಮಂಗಳೂರು-ಉಡುಪಿ ಸಾರಿಗೆ ಇಲಾಖೆಯ ಸಿಬ್ಬಂದಿ ಬಸ್ ಸಂಚಾರವನ್ನು ಸ್ಥಗಿತಗೊಳಿಸದೆ ಯಥಾಪ್ರಕಾರ ಸಾರಿಗೆ ಸಂಚಾರ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹತ್ತು ಬೇಡಿಕೆಗಳನ್ನು ಇರಿಸಿ ಪ್ರತಿಭಟನೆ ನಡೆಸಲಾಗಿತ್ತು. ಅದರಲ್ಲಿ ಒಂಭತ್ತು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೆವು. ಅದಕ್ಕೆ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡಿರುವ ಸಮಿತಿಯನ್ನು ರಚನೆ ಮಾಡಲಾಗಿದ್ದು, ಆ ಒಂಭತ್ತು ಬೇಡಿಕೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನಿಂದ 26 ನರ್ಮ್ ಬಸ್ಗೆ ಪರ್ಮಿಟ್
ಮಂಗಳೂರಿನಿಂದ 26 ನರ್ಮ್ ಬಸ್ಗೆ ಪರ್ಮಿಟ್ ನೀಡುವ ಬಗ್ಗೆ ಯೋಜನೆ ಮಾಡಲಾಗಿತ್ತು. ಆದರೆ ಇನ್ನೂ ಕಾರ್ಯಯೋಜನೆಯಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪರ್ಮಿಟ್ಗಳ ಬಗ್ಗೆ, ಖಾಸಗಿ ಬಸ್ಗಳ ಸಮಸ್ಯೆಗಳ ಬಗ್ಗೆ ಸಂಜೆ 4 ಗಂಟೆಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅಲ್ಲದೆ ಖಾಸಗಿ ಬಸ್ಗಳ ಮುಖಂಡರೂ ಮನವಿಯನ್ನು ನೀಡುತ್ತಿದ್ದಾರೆ. ಆ ಮನವಿ ಆಧರಿಸಿ ಯಾವ ರೀತಿ ಪರಿಹಾರ ಒದಗಿಸಬೇಕೋ, ಅದನ್ನು ಇಲ್ಲಿಯೇ ನಾಳೆಯೊಳಗೆ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.