ಮಂಗಳೂರು: ಭವಿಷ್ಯದಲ್ಲಿ ಕ್ರೀಡಾಪಟುಗಳು ಒಲಿಂಪಿಕ್ಸ್ ರೀತಿಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲು ಮಂಗಳೂರಿನಲ್ಲಿ 'ಖೇಲೋ ಇಂಡಿಯಾ ತರಬೇತಿ ಕೇಂದ್ರ’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಅದರಂತೆ ಮೊದಲ ಹಂತದ ಕಾರ್ಯಗಳು ಈಗಾಗಲೇ ಆರಂಭಗೊಂಡಿದೆ.
'ಒಂದು ಜಿಲ್ಲೆ ಒಂದು ಕ್ರೀಡೆ' ಎಂಬ ಪರಿಕಲ್ಪನೆಯಡಿಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ಮಾಡಲು ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸಲಿದೆ. ತರಬೇತಿ ಕೇಂದ್ರದ ಪ್ರಾರಂಭಕ್ಕೆ ಖರ್ಚು ಹಾಗೂ ಮೂಲಸೌಕರ್ಯಕ್ಕಾಗಿ ಸದ್ಯ 2 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇಂತಹದ್ದೇ ಕೇಂದ್ರಗಳು ಆರಂಭಿಸಲಾಗಿದ್ದು, ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುವ ಕ್ರೀಡೆಯನ್ನು ತರಬೇತಿ ನೀಡಲಾಗುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದಲ್ಲಿ ಅಥ್ಲೆಟಿಕ್ ಕ್ರೀಡೆಗೆ ತರಬೇತಿ ನೀಡಲು ಆದೇಶಿಸಲಾಗಿದೆ.
ತರಬೇತಿಗೆ 30 ಕ್ರೀಡಾಪಟುಗಳ ಆಯ್ಕೆ
ತರಬೇತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ 30 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶೇ 50ರಷ್ಟು ಬಾಲಕಿಯರು ಮತ್ತು ಶೇ.50ರಷ್ಟು ಬಾಲಕಿಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಆಯ್ಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಸದ್ಯ ಪ್ರಗತಿಯಲ್ಲಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತರಬೇತಿ ನೀಡಲು ಮುಂದೆ ಬಂದಲ್ಲಿ ವಾರ್ಷಿಕ 5 ಲಕ್ಷ ರೂ. ವೇತನ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ವಿಜೇತರು ತರಬೇತಿ ನೀಡಲು ಇಚ್ಛೆ ಪಟ್ಟಲ್ಲಿ ಅವರಿಗೆ ವಾರ್ಷಿಕ 4 ಲಕ್ಷ ರೂ. ನೀಡಲಾಗುತ್ತದೆ.
ಒಲಿಂಪಿಕ್ಸ್ನಲ್ಲಿ ಹೆಚ್ಚು ಪದಕ ಗುರಿ
ಈ ಎರಡೂ ವರ್ಗದಲ್ಲಿ ಇಲ್ಲದಿದ್ದರೆ ಎನ್ಐಎಸ್ ಶೈಕ್ಷಣಿಕ ಅರ್ಹತೆ ಪಡೆದ ಕೋಚ್, ಕ್ಲಬ್ ಮೂಲಕ ತರಬೇತಿ ನೀಡುವವರಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಪ್ರತಿ ಕ್ರೀಡಾ ಪಟುವು ಎನ್ಎಸ್ಆರ್ಎಸ್ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟವು 2028ರಲ್ಲಿ ನಡೆಯಲಿದೆ. ಈ ಸಂದರ್ಭ ಪದಕ ಪಟ್ಟಿಯಲ್ಲಿ ಭಾರತ ದೇಶವು ಅಗ್ರ 10 ಸ್ಥಾನದೊಳಗೆ ಪಡೆಯುವಂತೆ ಮಾಡುವುದು ಕೇಂದ್ರ ಕ್ರೀಡಾ ಇಲಾಖೆಯ ಗುರಿ.
ಈ ಗುರಿ ಸ್ಥಾಪನೆಗೆಂದು ದೇಶದ ಕ್ರೀಡಾ ಪ್ರತಿಭೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಉದ್ದೇಶಕ್ಕೆ ಕೇಂದ್ರ ಸರಕಾರವು ಪ್ರತೀ ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ತರಬೇತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಅದರಂತೆ ದ.ಕ. ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಈ ಕೇಂದ್ರ ತಲೆ ಎತ್ತಲಿದೆ. 30 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ: ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ತಾಯಿ : ಇಬ್ಬರು ಮಕ್ಕಳು ಸಾವು