ಮಂಗಳೂರು: ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ದೃಢೀಕರಿಸಲು ಬಯೋಮೆಟ್ರಿಕ್ ಬಳಸುವುದು ಎಲ್ಲಾ ಕಡೆಗಳಲ್ಲಿ ಮಾಮೂಲು. ಆದರೆ ಕೋವಿಡ್ ಬಳಿಕ ಈ ರೀತಿಯಲ್ಲಿ ಹಾಜರಾತಿಯನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಆದ್ದರಿಂದ ಸುರಕ್ಷಿತ ಹಾಜರಾತಿ ವಿಧಾನ ಅನುಸರಿಸಲು ಕಚೇರಿಗಳಲ್ಲಿ ಪರ್ಯಾಯ ಮಾರ್ಗವನ್ನು ಅನುಸರಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ದುಬಾರಿ ವೆಚ್ಚದ ಫೇಸ್ ರೆಕೆಗ್ನಿಷನ್ (ಮುಖ ಗುರುತಿಸುವಿಕೆ) ಸಿಸ್ಟಂ ಅನ್ನು ಕೈಗಾರಿಕಾ ವಲಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ (ಕೆಐಒಸಿಎಲ್) ತನ್ನ ಮಂಗಳೂರು ಕಚೇರಿಯಲ್ಲಿ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದ್ದು, ಇಂದಿನಿಂದ (ನ.6) ಜಾರಿಗೆ ಬರುತ್ತಿದೆ. ಇದು ಕೃತಕ ಬುದ್ಧಿ ಮತ್ತೆ ವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಕೆಐಒಸಿಎಲ್ ಮಂಗಳೂರು ಕಚೇರಿಯಲ್ಲಿ 1,500ಕ್ಕೂ ಅಧಿಕ ಸಿಬ್ಬಂದಿಯಿದ್ದು, ಇವರು ಕಚೇರಿಗೆ ಆಗಮಿಸುವ, ನಿರ್ಗಮಿಸುವ ಸಂದರ್ಭ ಕಡ್ಡಾಯವಾಗಿ ಫೇಸ್ ರೆಕೆಗ್ನಿಷನ್ ಸಿಸ್ಟಮ್ ಎದುರು ನಿಲ್ಲಬೇಕು.
ಆಗ ಅದರಲ್ಲಿರುವ ಕ್ಯಾಮರಾ ಮುಖದ ಚಹರೆಯನ್ನು ಸ್ಕ್ಯಾನ್ ಮಾಡಿ ಕಚೇರಿಗೆ ಹಾಜರಾಗುವುದನ್ನು ಖಚಿತಪಡಿಸುತ್ತದೆ. ಆದ್ದರಿಂದ ಮೊದಲೇ ಎಲ್ಲರ ಮುಖ ಚಹರೆಯನ್ನು ದಾಖಲು ಮಾಡಲಾಗುತ್ತದೆ.
ವಿಶೇಷವೆಂದರೆ ಆಗಂತುಕರು ಪ್ರವೇಶಿಸಿದ ತಕ್ಷಣ ಈ ಫೇಸ್ ರೆಕಗ್ನಿಷನ್ ಸಿಸ್ಟಮ್ ಅಲರ್ಟ್ ಸೂಚನೆ ನೀಡುತ್ತದೆ. ಅಲ್ಲದೆ ಕೋವಿಡ್ ನಿಯಮಾವಳಿಗಳಿಗೆ ಪೂರಕವಾಗಿ ಈ ವ್ಯವಸ್ಥೆ ಕಾರ್ಯಗತಗೊಳಿಸಲಾಗುತ್ತದೆ.