ಮಂಗಳೂರು/ದಕ್ಷಿಣ ಕನ್ನಡ : ಹಿಂದೂಯೇತರರಿಗೆ ದೇವಾಲಯಗಳ ಜಾತ್ರೋತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿ ಬ್ಯಾನರ್ ಅಳವಡಿಕೆ ಮಾಡುತ್ತಿರುವುದು ಹಲವು ದೇವಾಲಯಗಳಲ್ಲಿ ಕಂಡು ಬರುತ್ತಿದೆ. ಈ ಹಿಂದೆ ಕರಾವಳಿಯ ಕೆಲವು ಕಡೆ ಅಲ್ಲೊಂದು ಇಲ್ಲೊಂದು ಈ ರೀತಿಯ ಬ್ಯಾನರ್ ಅಳವಡಿಕೆ ಮಾಡಲಾಗ್ತಿತ್ತು. ಆದರೆ, ಈ ಬಾರಿ ಹಲವು ದೇವಾಲಯಗಳಲ್ಲಿ ಇಂಥ ಬ್ಯಾನರ್ ಅಳವಡಿಕೆ ಮಾಡಿರುವುದು ಕಂಡು ಬಂದಿದೆ.
ಇಲ್ಲಿನ ದೇವಾಲಯಗಳಾದ ಶ್ರೀಮಂಗಳಾದೇವಿ ದೇವಸ್ಥಾನ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ, ಕಾಟಿಪಳ್ಳ ಶ್ರೀಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ, ಮಾತ್ರವಲ್ಲದೆ ಕರಾವಳಿಯಲ್ಲಿ ಕೋಮುಸಾಮರಸ್ಯಕ್ಕೆ ಪ್ರಸಿದ್ಧಿ ಪಡೆದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಇಂತಹ ಬ್ಯಾನರ್ ಅಳವಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಮೂಲಕ ಒಂದು ಸಮುದಾಯಕ್ಕೆ ವ್ಯಾಪಾರವನ್ನು ನಿರ್ಬಂಧಿಸುವ ಕಾರ್ಯ ಆಗುತ್ತಿದ್ದು,ಕೋಮು ಸೌಹಾರ್ದ ಕದಡುವ ಕಾರ್ಯ ಆಗುತ್ತಿದೆ ಎಂದು ಹೇಳಲಾಗಿದೆ. ಇಲ್ಲಿ ದೇವಾಲಯದ ಆಡಳಿತ ಮಂಡಳಿಗಳು ಯಾವುದೇ ಸಮುದಾಯದವರಿಗೂ ವ್ಯಾಪಾರ ಮಾಡಲು ಅಡ್ಡಿ ಪಡಿಸುತ್ತಿಲ್ಲ. ಆದರೆ, ಹಿಂದೂ ಸಂಘಟನೆಗಳು ಈ ರೀತಿಯ ಬ್ಯಾನರ್ ಅಳವಡಿಕೆ ಮಾಡಿ ಮುಸ್ಲಿಂ ಸಮುದಾಯದವರ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿರುವುದಾಗಿ ತಿಳಿದು ಬಂದಿದೆ.
ಈ ರೀತಿ ಬ್ಯಾನರ್ ಅಳವಡಿಕೆ ಮಾಡಿರುವ ಹಿನ್ನೆಲೆ ಮುಸ್ಲಿಂ ವ್ಯಾಪಾರಿಗಳು ದೇವಸ್ಥಾನದ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಈ ಬಾರಿ ಹೆಚ್ಚಿನ ಕಡೆಗಳ ಜಾತ್ರೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಸಂಖ್ಯೆ ಇಳಿಮುಖವಾಗಿದೆ. ಮಂಗಳೂರಿನ ಶ್ರೀಮಂಗಳಾದೇವಿ ದೇವಾಲಯದಲ್ಲೂ ಈ ರೀತಿಯ ಗೊಂದಲ ಏರ್ಪಟ್ಟಿತ್ತು. ಆದರೆ, ದೇವಾಲಯದ ಆಡಳಿತ ಮಂಡಳಿ ಈ ಬಾರಿ ಜಾತ್ರೋತ್ಸವದ ಸಂತೆಯನ್ನೇ ರದ್ದುಪಡಿಸಿ ಈ ಗೊಂದಲಕ್ಕೆ ತೆರೆ ಎಳೆದಿದೆ.
ಮುಖ್ಯವಾಗಿ ಹಿಂದೂ-ಮುಸ್ಲಿಂ ಸಾಮರಸ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗಿದೆ. ಈ ದೇವಸ್ಥಾನವನ್ನು ಸಾಕ್ಷಾತ್ ದೇವಿಯ ಆಣತಿಯಂತೆ ಮುಸಲ್ಮಾನ ವ್ಯಾಪಾರಿ ಬಪ್ಪ ಬ್ಯಾರಿ ನಿರ್ಮಾಣ ಮಾಡಿದ್ದನೆಂದು ಐತಿಹ್ಯವಿದೆ. ಹೀಗಾಗಿಯೇ, ದೇವಸ್ಥಾನವು ಬಪ್ಪನಾಡು ಎಂದು ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈಗಲೂ ಆತನ ವಂಶಸ್ಥರು ಜಾತ್ರೋತ್ಸವದ ಸಂದರ್ಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆಂದು ಹೇಳಲಾಗಿದೆ.
ಆದರೆ, ಇದೀಗ ಇಲ್ಲಿಯೂ ಮುಸ್ಲಿಂ ಸಮುದಾಯದ ವ್ಯಾಪಾರಿಗಲಿಗೆ ವ್ಯಾಪಾರ ನಿರಾಕರಣೆ ಮಾಡಲಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಬಪ್ಪನಾಡು ದೇವಸ್ಥಾನದ ಆಡಳಿತ ಮಂಡಳಿ, ತಾವು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಮಾಡಿಲ್ಲ. ವ್ಯಾಪಾರ ನಿರಾಕರಣೆ ಬ್ಯಾನರ್ ತಾವು ಅಳವಡಿಕೆ ಮಾಡಿಲ್ಲ. ಈ ಬ್ಯಾನರ್ ದೇವಸ್ಥಾನದ ಆವರಣದ ಒಳಗೆ ಅಳವಡಿಕೆಯಾಗಿಲ್ಲ. ಮಾರ್ಗದ ಬದಿಯಲ್ಲಿ ಹಾಕಲಾಗಿದೆ ಎಂದು ಹೇಳಿದೆ. ಈ ಬ್ಯಾನರ್ ಯಾರು ಹಾಕಿದ್ದಾರೆಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮಗಳ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಗುತ್ತಿಗೆ ನೀಡತ್ತಕ್ಕದಲ್ಲ ಎಂಬ ಅಧಿನಿಯಮವಿದೆ. ಈ ನಿಟ್ಟಿನಲ್ಲಿ ಹಿಂದೂಯೇತರರಿಗೆ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಬಾರದೆಂದು ದ.ಕ.ಜಿಲ್ಲಾಧಿಕಾರಿಯವರ ಮೂಲಕ ಧಾರ್ಮಿಕ ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಓದಿ : ಶೇ.40 ಕಮಿಷನ್ ಆರೋಪ ಮೇಲೆ ಚರ್ಚೆಗೆ ಅವಕಾಶ ನಿರಾಕರಣೆ : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ