ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದವರ ಮೇಲೆ ಡಿಜೆ ಇದ್ದ ಮಿನಿ ಲಾರಿ ಹರಿದು ನಾಲ್ವರು ಸಾವನ್ನಪ್ಪಿ, 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಕಳೆದ ಬುಧವಾರ ರಾತ್ರಿ ದುರಂತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೇಡಂ ತಾಲೂಕಿನ ಮೆದಕ ತಾಂಡಾದ ಸುಗಣಾಬಾಯಿ ಚೌವ್ಹಾಣ (40), ತೆಲಂಗಾಣದ ದುಂಕುಡನಾಯಕ ತಾಂಡಾದ ವಿಜ್ಜಿಬಾಯಿ ರಾಥೋಡ್ (30) ಹಾಗೂ ಕುಮಾರನಾಯಕ ರಾಥೋಡ್ (35) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
![Four people dead due to accident](https://etvbharatimages.akamaized.net/etvbharat/prod-images/15224787_thumbjpg.jpg)
ಮದನಾ ತಾಂಡದ ಯುವಕ ಹಾಗೂ ಕಡತಾಲ ತಾಂಡಾದ ಯುವತಿಯ ಮದುವೆ ಗುರುವಾರ ಕಡತಾಲ ತಾಂಡಾದಲ್ಲಿ ನಡೆಯಬೇಕಾಗಿತ್ತು. ಮದುವೆಯ ಹಿಂದಿನ ದಿನ (ಬುಧವಾರ) ಮದುಮಗಳನ್ನು ಕಡತಾಲ ತಾಂಡಾಕ್ಕೆ ಕರೆದುಕೊಂಡು ಬರಲಾಗಿದೆ. ಮದುಮಗಳನ್ನು ಸ್ವಾಗತಿಸಲು ತೆಲಂಗಾಣದಿಂದ ತರಿಸಲಾಗಿದ್ದ ಡಿಜೆ ಹಾಕಿ ರಾತ್ರಿ ಮೆರವಣಿಗೆ ನಡೆಯುತ್ತಿತ್ತು. ಬೇರೆ ಊರುಗಳಿಂದ ಆಗಮಿಸಿದ್ದ ನೆಂಟರು, ಸಂಬಂಧಿಕರು, ಕುಣಿದು ಸಂಭ್ರಮಿಸುತ್ತಿದ್ದರು.
ಇದೇ ಸಂದರ್ಭದಲ್ಲಿ ಯಮಸ್ವರೂಪಿ ಮಿನಿ ಲಾರಿ ಏಕಾಏಕಿ ಜನರ ಮೇಲೆ ಹರಿದಿದೆ. ಪರಿಣಾಮ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದರು. ಗಾಯಗೊಂಡಿರುವ 10ಕ್ಕೂ ಅಧಿಕ ಜನರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕ ಇಲ್ಲದಿದ್ದಾಗ ಅಪರಿಚಿತರೊಬ್ಬರು ಸೆಲ್ಪ್ ಹೊಡೆದು ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಮುಧೋಳ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಮುರುಗೋಡ, ಸಬ್ ಇನ್ಸ್ಪೆಕ್ಟರ್ ಚಿದಾನಂದ ಕಾಶಪ್ಪಗೋಳ, ಇಂದಿರಾ ಬಾಯಿ ಪಾಟೀಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಜೆ ಹಾಗೂ ಜನರೇಟರ್ ಇಡಲಾಗಿದ್ದ ಮಿನಿ ಲಾರಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಕಬ್ಬಿನ ಲಾರಿ ಪಲ್ಟಿ: ಇಬ್ಬರು ದುರ್ಮರಣ