ಹುಬ್ಬಳ್ಳಿ : ಅದು ಇತ್ತಿಚೆಗೆ ಮದುವೆಯಾಗಿದ್ದ ನವಜೋಡಿ. ಮದುವೆ ಆಗಿ ಸಾಂಪ್ರದಾಯಿಕವಾಗಿ ಗಂಡನ ಮನೆಗೆ ಹೋಗಬೇಕಿದ್ದ ಮದುಮಗಳು ಈಗ ಕೋರ್ಟ್ ಹಾಗೂ ಪೋಲಿಸ್ ಠಾಣೆ ಮೆಟ್ಟಿಲು ಏರುತ್ತಿದ್ದಾಳೆ. ಸಹೋದರ ಸಂಬಂಧಿಯ ವಿರುದ್ಧವೇ ಆಕ್ರೋಶಗೊಂಡಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ.
ಮೊನ್ನೆಯಷ್ಟೇ ನಡೆದ ನವವಿವಾಹಿತೆಯೊಬ್ಬರ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣವಾಗಿದ್ದ ಯುವತಿ ಸಹನಾ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಆದರೆ ಆ ಯುವತಿ ಮಾತ್ರ ನನಗೆ ನ್ಯಾಯ ಬೇಕು. ನಾನು ಪ್ರೀತಿಸಿ ಮದುವೆಯಾಗಿದ್ದೇನೆ. ಆದರೆ, ಕಾರ್ಪೊರೇಟರ್ ಮಾಡಿದ ಕಾರ್ಯದಿಂದ ಈಗ ನಾನು ಪೊಲೀಸ್ ಹಾಗೂ ಕೋರ್ಟ್ನಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನನ್ನನ್ನು ಅಪಹರಿಸಿದ್ದಾರೆ ಎಂದು ಕಾರ್ಪೊರೇಟರ್ ವಿರುದ್ಧ ಯುವತಿ ದೂರು ನೀಡಿದ್ದಾರೆ. ಆದರೆ, ಪ್ರಕರಣ ದಾಖಲಾಗಿ ನಾಲ್ಕು ದಿನಗಳು ಕಳೆದರೂ ಯಾವುದೇ ರೀತಿಯಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಯುವತಿ ಸಹನಾ ಗಂಭೀರವಾಗಿ ಆರೋಪ ಮಾಡಿದ್ದಾರೆ. ಅಲ್ಲದೇ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಆರತಕ್ಷತೆ ಸಿದ್ದತೆಯಲ್ಲಿದ್ದ ಸೋದರ ಸಂಬಂಧಿ ಯುವತಿಯನ್ನು ಅಪಹರಿಸಿದ ಆರೋಪದ ಮೇಲೆ ಕಾರ್ಪೋರೇಟರ್ ಸೇರಿ ಮೂರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಮನೆಯವರ ವಿರೋಧ ಲೆಕ್ಕಿಸದೇ ಏಳು ತಿಂಗಳ ಹಿಂದೆ ಸಹನಾ, ನಿಖಿಲ್ ದಾಂಡೇಲಿ ಎಂಬ ಯುವಕನನ್ನು ಮದುವೆಯಾಗಿದ್ದರು.
ಆದರೆ, ಮನೆಯವರನ್ನು ಬಿಟ್ಟು ಮದುವೆಯಾಗಿದ್ದ ಅವರು, ಹೆತ್ತವರ ಒಪ್ಪಿಗೆ ಪಡೆದು ಕಳೆದ 26 ರಂದು ಆರತಕ್ಷತೆ ಕಾರ್ಯಕ್ರಮಕ್ಕೆ ಪೋಷಕರ ಬಳಿ ಆರ್ಶೀವಾದ ಪಡೆಯಲು ಹೋಗಿದ್ದ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ನಿಖಿಲ್ ದಾಂಡೇಲಿ, ಗೋಕುಲ ರೋಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಕಾರ್ಪೊರೇಟರ್ ಹುಬ್ಬಳ್ಳಿಯಲ್ಲಿಯೇ ಇದ್ದರೂ ವಶಕ್ಕೆ ಪಡೆಯದ ಪೊಲೀಸರ ನಡೆಯ ವಿರುದ್ಧ ನಿಖಿಲ್ ದಾಂಡೇಲಿ ಆಕ್ರೋಶ ವ್ಯಕ್ತಪಡಿಸಿದ್ದು, ದಂಪತಿ ಕೋರ್ಟ್ ಮೊರೆ ಹೋಗಿದ್ದಾರೆ. ನಮಗೆ ನ್ಯಾಯ ಕೊಡಿಸಿ, ಕಿಡ್ನ್ಯಾಪರ ಚೇತನ ಹಿರೇಕೆರೂರ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ದಂಪತಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದು, ಆರತಕ್ಷತೆಯ ಸಂಭ್ರಮದಲ್ಲಿದ್ದವರು ಈಗ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಈ ಬಗ್ಗೆ ಕಾನೂನು ರೀತಿಯಲ್ಲಿ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕಿದೆ.
ಇದನ್ನೂ ಓದಿ : ನನಗೆ ತಿನ್ನಲು ಬಿಸ್ಕತ್ತು, ಚಾಕೊಲೇಟ್, ನೀರು ಕೊಟ್ಟರು.. ಕಿಡ್ನ್ಯಾಪ್ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬಾಲಕ!